ಹಾಸನ: ನಗರದಲ್ಲಿ ಮರಗಳ ಮಾರಣ ಹೋಮ ನಡೆಯುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಮುಂದು ವರೆದಲ್ಲಿ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ವನ್ಯಜೀವಿ ವಾರ್ಡನ್ ಎಚ್.ಪಿ ಮೋಹನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು ಹಾಸನ ನಗರದ ರಸ್ತೆ ವಿಸ್ತರಣೆ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಈಗಾಗಲೇ ನೂರಾರು ಮರಗಳನ್ನು ಕಡಿಯಲಾಗಿದೆ ಇದರಿಂದ ಮುಂದಿನ ದಿನಗಳಲ್ಲಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಂಡಿತ. ಈ ಬಗ್ಗೆ ಅರಣ್ಯ ಇಲಾಖೆ ಗಂಭೀರ ಚಿಂತನೆ ಮಾಡುವ ಮೂಲಕ ಮರಗಳ ರಕ್ಷಣೆ ಮಾಡಬೇಕಿದೆ ಎಂದರು.
ನಗರದಲ್ಲಿ ಈ ಹಿಂದೆ ಟ್ರೀ ಕಮಿಟಿ ಅಸ್ತಿತ್ವದಲ್ಲಿ ಇದ್ದು ಯಾವುದೇ ಮರಗಳನ್ನು ಕಡಿಯಬೇಕಾದರೆ ಕಮಿಟಿಗೆ ಮಾಹಿತಿ ಲಭ್ಯವಾಗುತ್ತಿತ್ತು ಸದಸ್ಯರು ಸ್ಥಳಕ್ಕೆ ತೆರಳಿ, ಮರ ಪರಿಶೀಲನೆ ಮಾಡಿ ಮರ ಯಾವ ಸ್ಥಿತಿಯಲ್ಲಿ ಇದೆ ಅದನ್ನು ಕಡೆಯುವ ಅವಶ್ಯಕತೆ ಇದೆಯೋ ಇಲ್ಲವೋ ಎಂಬ ಬಗ್ಗೆ ಪರಿಶೀಲನೆ ನಡೆಸಿ ಅರಣ್ಯ ಇಲಾಖೆಗೆ ವರದಿಯನ್ನು ನೀಡಲಾಗುತ್ತಿತ್ತು, ನಂತರ ಅರಣ್ಯ ಇಲಾಖೆ ಮೂಲಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು ಆದರೆ ರಾತ್ರೋ ರಾತ್ರಿ ನಗರದಲ್ಲಿ ಮರಗಳು ಕಡಿಯಲಾಗುತ್ತಿದ್ದು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ದೂರಿದರು.
ನಂತರ ಮಾತನಾಡಿದ ಪರಿಸರ ಪ್ರೇಮಿ ಕಿಶೋರ್ ಕುಮಾರ್ ಅವರು ನಗರದ ನಾಗರಿಕರೂ ಮರಗಳ ಅವಶ್ಯಕತೆ ಮರೆತಿದ್ದು ಬೇಕಾಬಿಟ್ಟಿ ಕಡಿಯಲಾಗುತ್ತಿದೆ ಎಲೆ ಉದುರುತ್ತದೆ, ಪಕ್ಷಿಗಳು ಕೂರುತ್ತವೆ, ಬಿಲ್ಡಿಂಗ್ ಮರೆಯಾಗುತ್ತದೆ, ಹೀಗೆ ಕ್ಷುಲ್ಲಕ ನೆಪಗಳನ್ನು ಕೊಟ್ಟು ಲಂಚ ಮತ್ತು ಪ್ರಭಾವ ಬಳಸಿ ಮರಗಳನ್ನು ಕಡಿಯುತ್ತಿದ್ದಾರೆ.
ಟೊಳ್ಳಾಗಿರುವ ಒಣಗಿರುವ ಬೀಳುವಂತಹ ಅಪಾಯಕಾರಿ ಮರಗಳ ಕೊಂಬೆಗಳನ್ನು ಟ್ರೀಮಿಂಗ್ ಮಾಡಲು ಅಥವಾ ಅವಶ್ಯಕತೆ ಇದ್ದರೆ ಇಡೀ ಮರವನ್ನು ಕಡಿಯಲು ಯಾವುದೇ ಆಕ್ಷೇಪಣೆ ಇಲ್ಲ ಆದರೆ ಆರೋಗ್ಯವಂತ ವಯಸ್ಸಾಗಿರದ ಮರಗಳನ್ನು ಕಡಿಯುತ್ತಿರುವುದು ಪರಿಸರ ಪ್ರೇಮಿಗಳಿಗೆ, ಪ್ರಜ್ಞಾವಂತ ನಾಗರಿಕರಿಗೆ ಅತಿವ ನೋವುಂಟು ಮಾಡಿದೆ ಎಂದು ಹೇಳಿದರು.
ಯಾವುದೇ ಮರವನ್ನು ಕಡಿಯಬೇಕಾದರೆ ದಿ ಕರ್ನಾಟಕ ರಿಸರ್ವೇಶನ್ ಆಫ್ ಟ್ರೀಸ್ ಆಕ್ಟ್ ೧೯೭೬ರ ಕಾನೂನಿನಡಿ ಅರ್ಜಿ ಸಲ್ಲಿಸಿ ಒಪ್ಪಿಗೆ ಪಡೆದು ಕಡಿಯಬೇಕಾಗುತ್ತದೆ ಆದರೆ ಈ ನಿಯಮವನ್ನು ಇಲ್ಲಿ ಗಾಳಿಗೆ ತೂರಲಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಸಹ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಆಪಾದಿಸಿದರು.
ಜಿಲ್ಲೆಯಲ್ಲಿ ಕಾಡ್ಗಿಚ್ಚುಗಳು ಪ್ರಕರಣ ಹೆಚ್ಚಾಗುತ್ತಿದೆ ಈಗಾಗಲೇ ಸಕಲೇ ಶಪುರ ತಾಲೂಕಿನ ಮೂರ್ಖಣ್ಣು ಗುಡ್ಡ, ವನಗೂರು ಬೆಟ್ಟ, ಶಿರಾಡಿ ಘಾಟ್ ಕಾಡು, ಮತ್ತು ಹಾಸನ ತಾಲೂಕಿನ ತಿರುಪತಿ ಹಳ್ಳಿ ಬೆಟ್ಟಗಳಲ್ಲಿ ಕಾಡ್ಗಿಚ್ಚು ಉಂಟಾಗಿರುವುದು ಕಾಣಬಹುದು, ಇವೆಲ್ಲವೂ ಸಹಜ ಕಾಡ್ಗಿಚ್ಚಾಗಿರದೆ ಮನುಷ್ಯರು ಹಚ್ಚಿದ ಬೆಂಕಿಯಾಗಿದೆ. ಈ ಬಗ್ಗೆ ಪ್ರತಿ ಪ್ರಕರಣದಲ್ಲಿ ಐಪಿಸಿ ಅರಣ್ಯ ಸಂರಕ್ಷ ಣಾ ಕಾಯ್ದೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕುಲಂಕುಶ ತನಿಖೆ ನಡೆಸಿ ಅಪರಾ ಧಿಗಳಿಗೆ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು.
ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿಗಳ ಕೊರತೆ ಇದೆ ಹಾಗೂ ಕಾಡ್ಗಿಚ್ಚು ನಿಯಂತ್ರಣಕ್ಕೆ ಆಧುನಿಕ ವ್ಯವಸ್ಥೆಯನ್ನು ಮಾಡಬೇಕಾಗಿದ್ದು ಸೂಕ್ತ ಸಲಕರಣೆ ಗಳನ್ನು ವನಪಾಲಕರಿಗೆ ನೀಡಬೇಕಿದೆ ಹಾಗೂ ಅರಣ್ಯ ಹೆಚ್ಚಿರುವ ಚಿಕ್ಕಮಗಳೂರು ,ಹಾಸನ ,ಮಡಿಕೇರಿ ಜಿಲ್ಲೆಗಳಿಗೆ ಸರ್ಕಾರದಿಂದ ಹೆಲಿಕ್ಯಾಪ್ಟರ್ , ಬೈನಾಕುಲರ್, ದ್ರೋಣ್ ಸೇರಿದಂತೆ ಅಗತ್ಯ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು .
ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರಿಗೆ ಕಟ್ಟುನಿಟಿನ ನಿರ್ದೇಶನ ನೀಡಬೇಕು ಫೆಬ್ರವರಿ ಇಂದ ಮೇ ತಿಂಗಳ ವರೆಗೂ ಟ್ರಕಿಂಗ್ ಹಾಗೂ ಇತರೆ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದರು. ಹಿರಿಯ ಪತ್ರಕರ್ತರಾದ ಆರ್.ಪಿ ವೆಂಕಟೇಶಮೂರ್ತಿ ಅವರು ಮಾತನಾಡಿ ನಗರದ ಅಭಿವೃದ್ಧಿ ಮುಖ್ಯ ಅದಕ್ಕಾಗಿ ಮರಗಳನ್ನು ಬೇಕಾಬಿಟ್ಟಿ ಕಡಿಯುವುದು ಸರಿಯಲ್ಲ ಸ್ಥಳೀಯ ಶಾಸಕರು ಈ ನಿಟ್ಟಿನಲ್ಲಿ ಗಮನಹರಿಸಬೇಕು, ರಸ್ತೆ ಮಾಡುವುದೇ ಅಭಿವೃದ್ಧಿಯಲ್ಲ ಇದರೊಂದಿಗೆ ಪರಿಸರ ಸಂರಕ್ಷಣೆಯು ಅತ್ಯಗತ್ಯವಾ ಗಿದೆ ನಗರವಾಸಿಗಳ ಆರೋಗ್ಯ ಚೆನ್ನಾಗಿರಬೇಕು ಎಂದಾದರೆ ಮೈದಾನಗಳು, ಉದ್ಯಾನವನಗಳು, ಕೆರೆಗಳು ರಸ್ತೆ ಬದಿಯ ಮರಗಳು ಇರುವುದು ಅತ್ಯಂತ ಅವಶ್ಯಕ ಹಾಗಾಗಿ ಇನ್ನು ಮುಂದೆ ಅನವಶ್ಯಕವಾಗಿ ಯಾವುದೇ ಮರಗಳನ್ನು ಕಡಿಯಬಾರದು, ನಮ್ಮ ಮನವಿಯನ್ನು ನಿರ್ಲಕ್ಷಿಸಿದರೆ ಪ್ರತಿಭಟನೆಯ ದಾರಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಡ್ಗಿಚ್ಚು ತುರ್ತು ದೂರವಾಣಿ ಸಂಖ್ಯೆ ೧ ೯ ೨ ೬. ಅರಣ್ಯ ಪ್ರದೇಶಗಳಲ್ಲಿ ಯಾವುದೇ ಸಂದರ್ಭ ದಲ್ಲಿ ಕಾರ್ಗಿಚ್ಚು ಹಾಗೂ ಇನ್ನಿತರ ಅಗ್ನಿ ಅವಘಡಗಳು ಸಂಭವಿಸಿದಲ್ಲಿ ಅರಣ್ಯ ಇಲಾಖೆಯಿಂದ ಜಾರಿಗೆ ತಂದಿರುವ ೧೯೨೬ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಮಾಹಿತಿ ನೀಡುವಂತೆ ಇದೆ ವೇಳೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಚ. ನಾ ಅಶೋಕ್ ಕುಮಾರ್, ಹಗರೆ ಸದಾಶಿವ, ರಾಜೀವ ಗೌಡ ಇದ್ದರು.