ಹಾಸನ: ಮುಸ್ಲಿಮರ ಕಠಿಣ ಉಪವಾಸದ ಸಂದರ್ಭದಲ್ಲಿ ಮೀಸಲಾತಿ ತೆಗೆದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ, ಮುಸ್ಲಿಂಮರ ಭಕ್ತಿಯ ಸಾಕ್ಷಿಯಾಗಿ ಬಿಜೆಪಿ ಸರ್ವನಾಶ ಆಗಲಿದೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೇಲೂರು ಚೆನ್ನಕೇಶವ ರಥೋತ್ಸವದಲ್ಲಿ ಭಾಗವಹಿಸಿ , ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ರಾಷ್ಟ್ರೀಯ ಪಕ್ಷಗಳು ಮಾಡದ ಅಭಿವೃದ್ಧಿ ಕಾರ್ಯಗಳನ್ನು, ಅಲ್ಪಾವಧಿಯಲ್ಲಿ ಬಂದ ಜೆಡಿಎಸ್ ಸರ್ಕಾರ ಮಾಡಿದೆ.
ದೇವೇಗೌಡರು ಮುಸ್ಲಿಮರಿಗೆ ಮೀಸಲಾತಿ ನೀಡುವ ಮೂಲಕ ಅವರನ್ನು ಆ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಟ್ಟಿದ್ದು, ಅಂತಹ ಸಮಾಜವನ್ನು ತುಳಿಯುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಮುಸ್ಲಿಮರ ಕಠಿಣ ಉಪವಾಸ ಮಾಡುವ ಸಂದರ್ಭದಲ್ಲಿ ಮೀಸಲಾತಿಯನ್ನ ತೆಗೆದು ಇತರೆ ಜಾತಿಗಳಿಗೆ ನೀಡಿರುವುದು ಬಿಜೆಪಿ ಪತನಕ್ಕೆ ನಾಂದಿ ಹಾಡುತ್ತದೆ. ಅವರು ಮಾಡುತ್ತಿರುವ ಕಠಿಣ ಶ್ರಮ ಮತ್ತು ಭಕ್ತಿಯ ಪರಾಕಾಷ್ಠೆಯಲ್ಲಿ ಬಿಜೆಪಿ ಪಕ್ಷ ಸರ್ವನಾಶ ಆಗುತ್ತದೆ ಎಂದು ಭವಿಷ್ಯ ನುಡಿದರು.
ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಮುಗಿಸಬೇಕೆಂದು ಹಲವು ತಂತ್ರಗಾರಿಕೆ ನಡೆಸುತ್ತಿದೆ ಆದರೆ ಚೆನ್ನಕೇಶವನ ಆಶೀರ್ವಾದ ಮತ್ತು ದೇವೇಗೌಡರು ಇರುವ ತನಕ ಯಾರು ಏನು ಮಾಡಲು ಸಾಧ್ಯವಿಲ್ಲ. ಮೊದಲು ನಮ್ಮ ಪ್ರಚಾರಕ್ಕೆ ಜಾಹೀರಾತು ನೀಡಬೇಕಿತ್ತು. ಆದರೆ ಈಗ ಪ್ರತಿನಿತ್ಯ ನಮ್ಮದೇ ಎಲ್ಲಾ ಚಾನೆಲ್ ನಲ್ಲೂ ಬೆಳಗ್ಗೆಯಿಂದ ಸಂಜೆ ತನಕ ಪ್ರಚಾರ ಕೊಡ್ತಾ ಇದ್ದೀರಿ. ಟಿವಿ ಮಾಧ್ಯಮದ ಮಾಲೀಕರಿಗೆ ಒಳ್ಳೆಯದಾಗಲಿ ಅಂತ ಮಾಧ್ಯಮವನ್ನು ಇದೇ ವೇಳೆ ಟೀಕಿಸಿದವರು.
ಪಕ್ಷ ಬಿಟ್ಟವರಿಗೆ ಚನ್ನಕೇಶವ ಶಿಕ್ಷೆ ಕೊಡುವನು
ಏನೋ ಜೆಡಿಎಸ್ ಪಕ್ಷವನ್ನ ಯಾರು ನಾಶ ಮಾಡಲು ಸಾಧ್ಯವಿಲ್ಲ ದೇವೇಗೌಡರ ನೆರಳಲ್ಲಿ ಬೆಳೆದು ೧೫-೨೦ ವರ್ಷ ಸಾಕಿದ ಗಿಣಿಗಳು ಇವತ್ತು ಬೇರೆ ಕಡೆಗೆ ಹೋಗಿದೆ. ದೇವೇಗೌಡರಿಗೆ ಮೋಸ ಮಾಡಿ, ಹೋಗಿದ್ದಾರಲ್ಲ ಅವರಿಗೆ ಚೆನ್ನಕೇಶವ ದೇವರೇ ಒಂದಲ್ಲ ಒಂದು ದಿನ ಶಿಕ್ಷೆ ಕೊಡುತ್ತಾನೆ.
ಲಿಂಗೇಶ್ ಪಾಪದ ಮನುಷ್ಯ
ಬೇಲೂರಿನ ಶಾಸಕ ಕೆ ಎಸ್ ಲಿಂಗೇಶ್ ೨೭೫೦ ಕೋಟಿ ಹಣವನ್ನು ಲೂಟಿ ಹೊಡೆದಿದ್ದಾರೆ ಎಂಬ ಆರೋಪಕ್ಕೆ ಲಿಂಗೇಶ್ ಒಬ್ಬ ಪಾಪದ ಮನುಷ್ಯ. ಎರಡು ರಾಷ್ಟ್ರೀಯ ಪಕ್ಷಗಳು ಸಂಚು ರೂಪಿಸಿ ಶಾಸಕನನ್ನ ರಾಜಕೀಯವಾಗಿ ಮುಗಿಸಲು ನೋಡುತ್ತಿದ್ದಾರೆ. ಬೇಲೂರಿಗೆ ಶಾಸಕರಾಗಿ ಬಂದ ಬಳಿಕ ಶಾಸಕರು ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಕಡತ ತೆಗೆದು ನೋಡಲಿ.
ರಣಘಟ್ಟ ಯೋಜನೆಯನ್ನ ಅನುಮೋದನೆ ಮಾಡಿಸಿಕೊಂಡು ಬರುವ ಸಂದರ್ಭದಲ್ಲಿ ಯಾರು ಕೈ ಕಾಲು ಹಿಡಿದು ಮಾಡಿಸಿಕೊಂಡು ಬಂದಿದ್ದಾರೆ ಎಂಬುದು ಜಿಲ್ಲೆಯ ಜನಕ್ಕೆ ಗೊತ್ತು. ಇದೆಲ್ಲವನ್ನ ಮೇಲಿರುವ ದೇವರೊಬ್ಬ ನೋಡಿಕೊಳ್ಳುತ್ತಾನೆ ಸುಮ್ಮನೆ ಆರೋಪ ಮಾಡಿ ತೇಜೋವಧೆ ಮಾಡಬಾರದು. ಇನ್ನು ಜಿಲ್ಲೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಎಎಪಿ ಮುಖಂಡರ ಮೇಲೆಯೂ ರಾಜ್ಯದ ಮುಖ್ಯಮಂತ್ರಿ ತನಿಖೆ ನಡೆಸುತ್ತಾರಾ ಎಂದು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.
ಶಿವಲಿಂಗೇಗೌಡರನ್ನು ಗಿಣಿಯಂತೆ ಸಾಕಿದ್ದೆ
ಅರಸೀಕೆರೆ ಶಾಸಕನನ್ನ ಗಿಣಿ ಸಾಕಿದ ಹಾಗೆ ಸಾಕಿದೆ ಆತ ಮೋಸ ಮಾಡಿ ಹೋಗಿದ್ದಾನೆ. ಈಗ ಶಿರಸಿ ವರೆಗೆ ಹೋಗಿ ರಾಜೀನಾಮೆ ಕೊಡಲು ಹೋಗಿದ್ದಾನೆ. ಕೊಡುವುದಾದರೆ ಎರಡು ವರ್ಷದ ಮೊದಲೇ ರಾಜೀನಾಮೆ ಕೊಡಬೇಕಿತ್ತು. ಇವತ್ತು ಕುರುಬ ಸಮಾಜದವರು ಲಿಂಗಾಯಿತರು ಮತ್ತು ಒಕ್ಕಲಿಗರು ನಮಗೆ ವೋಟ್ ಕೊಡಲ್ಲ ಅಂತ ಕಾಂಗ್ರೆಸ್ಸಿಗೆ ಹೋಗುತ್ತಿದ್ದೇನೆ ಎಂದರಲ್ಲ. ೧೫ ವರ್ಷ ಅವರು ವೋಟ್ ಹಾಕಿಲ್ವಾ? ಎಂದು ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ವಿರುದ್ಧವು ಹರಿಹಾಯ್ದರು, ಇನ್ನು ರಾಜ್ಯದಲ್ಲಿ ಮೋದಿ ಬಸ್ಸುಗಳು ಎಲ್ಲಾ ಪಕ್ಷದವರನ್ನ ಹತ್ತಿ ಹತ್ತಿ ಎಂದು ಬೇಡುತ್ತಿದ್ದಾರೆ ಆದರೆ ಹಳೆ ಬಸ್ಸು ಅಂತ ಯಾರು ಬಸ್ ಹತ್ತಿ ಹೋಗ್ತಾ ಇಲ್ಲ ಎಂದು ಟೀಕಿಸಿದರು.