ಬೇಲೂರು: ಬೇಲೂರಿನ ವಿಶ್ವವಿಖ್ಯಾತ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಆಗಮಿಸಿದ ಯುನೆಸ್ಕೋ ತಂಡವು ದೇಗುಲದ ಹಾಗೂ ಸುತ್ತಮುತ್ತಲಿನ ಮುನ್ನೂರು ಮೀಟರ್ ಆವರಣ, ಐತಿಹಾಸಿಕ ವಿಷ್ಣು ಸಮುದ್ರ ಕಲ್ಯಾಣಿ, ಹಾಗೂ ಅಕ್ಕಪಕ್ಕದ ಪ್ರಾಚೀನ ದೇವಾಲಯಗಳನ್ನು ವೀಕ್ಷಿಸಿತು.
ಟಿಯಾಂಗ್ ಕಿಯಾನ್ ಬೂನ್ ಅವರ ನೇತೃತ್ವದ ತಂಡಕ್ಕೆ ಇನ್ಫೋಸಿಸ್ ಫೌಂಡೇಶನ್ನ ಸುಧಾಮೂರ್ತಿ ಹಾಗೂ ಭಾರತೀಯ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ರಾಜ್ಯ ಪ್ರಾಚ್ಯವಸ್ತು ಅಧಿಕಾರಿಗಳು ದೇವಾಲಯದ ಇತಿಹಾಸ, ಶಿಲ್ಪಕಲೆ, ಐತಿಹ್ಯಗಳು ಹಾಗೂ ಹೊಯ್ಸಳರ ಕಾಲದ ಶಿಲ್ಪಕಲೆ ಕುಸುರಿ ಕೆತ್ತನೆಗಳ ಬಗ್ಗೆ ವಿವರಣೆ ನೀಡಿದರು.
ಚೆನ್ನಕೇಶವ ದೇವಸ್ಥಾನದಲ್ಲಿ ಬಳಪದ ಕಲ್ಲಿನಲ್ಲಿ ಅತ್ಯಂತ ಸೂಕ್ಷ್ಮ ಕೆತ್ತನೆ ಕಲಾ ನೈಪುಣ್ಯತೆ, ಮದನಿಕೆಯರ ಶಿಲ್ಪಗಳು, ನಾಟ್ಯ ಭಂಗಿಗಳ ಕೆತ್ತನೆಯಿಂದ ಕೂಡಿರುವ ನವರಂಗದ ಕಂಬಗಳ ಮೇಲೆ ಕೆತ್ತಲಾಗಿರುವ 4 ಮದನಿಕಾ ವಿಗ್ರಹಗಳು, ಶಿಲ್ಪ ಕಲೆ , ನಾಜೂಕಿನ, ಕುಸುರಿ ಕೆಲಸಗಳನ್ನು ಅತ್ಯಂತ ಆಸಕ್ತಿಯಿಂದ ಗಮನಿಸಿದ ಟಿಯಾಂಗ್ ಕಿಯಾನ್ ಬೂನ್ ಅವರು ಮೆಚ್ಚುಗೆ ಹಾಗೂ ಅಚ್ಚರಿ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸುಧಾ ಮೂರ್ತಿ ಅವರು ಇಲ್ಲಿನ ದೇವಾಲಯ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಯಾದರೆ ದೊಡ್ಡ ಗರಿಮೆ ನಮಗೆ ಲಭಿಸಲಿದೆ. ಯುನೆಸ್ಕೋ ಪಟ್ಟಿಗೆ ಬೇಲೂರು ಸೇರ್ಪಡೆಗೊಳಿಸುವುದರಿಂದ ವಿಶ್ವ ಮಟ್ಟದ ನಕಾಶೆಯಲ್ಲಿ ಗುರುತಿಸಲ್ಪಟ್ಟು ಪ್ರವಾಸಿಗರ ಹೆಚ್ಚಾಗುವುದರಿಂದ ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತವೆ ಎಂದರು .
ರಾಜ್ಯ ಪುರಾತತ್ವ ಇಲಾಖೆ ಆಯುಕ್ತರಾದ ದೇವರಾಜ್ ಮಾತನಾಡಿ ಯುನೆಸ್ಕೋ ತಂಡವು ಬೇಲೂರು, ಹಳೆಬೀಡು ಮತ್ತು ಸೋಮನಾಥಪುರ ದೇವಾಲಯಗಳ ಶಿಲ್ಪಕಲೆಗಳನ್ನು ವೀಕ್ಷಣೆ ಮಾಡಿ, ದೇವಾಲಯದ ವಾಸ್ತು ಶೈಲಿಯನ್ನು ವರದಿ ಮಾಡಿ ಯುನೆಸ್ಕೋ ಸಂಸ್ಥೆಗೆ ಸಲ್ಲಿಸುತ್ತಾರೆ. ಮುಂದಿನ ವರ್ಷದಲ್ಲಿ ಈ ಮೂರು ಸ್ಥಳಗಳು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಯಾಗುವ ಭರವಸೆಯಿದೆ. ಹಂಪಿ ಮತ್ತು ಪಟ್ಟದಕಲ್ಲು ಐತಿಹಾಸಿಕ ಸ್ಥಳಗಳು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿದ್ದು ಈ ಹೊಯ್ಸಳರ ಈ ಶಿಲ್ಪಕಲೆಯ ಹೊಸ 3 ನೇ ಸ್ಥಳಗಳು ಯುನೆಸ್ಕೋ ಪಟ್ಟಿಗೆ ಸೇರುವ ಅವಕಾಶ ಬಂದಿದೆ. ಯುನೆಸ್ಕೋ ಪಟ್ಟಿಗೆ ಸೇರಿದ ನಂತರ ಮೂಲಭೂತ ಸೌಕರ್ಯಗಳು ಹೆಚ್ಚಾಗಲಿದ್ದು, ಪ್ರವಾಸಿಗರಿಗೆ ಸ್ಥಳಿಯರಿಗೆ ಕಾನೂನು ನಿಯಮದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ತಿಳಿಸಿದರು .
ಪುರಸಭೆ ಅಧ್ಯಕ್ಷ ದಾನಿ ಮಾತನಾಡಿ, ಹಲವು ವರ್ಷಗಳಿಂದ ವಿಶ್ವವಿಖ್ಯಾತ ಶ್ರೀ ಚನ್ನಕೇಶವ ದೇವಾಲಯವನ್ನು ಯುನೆಸ್ಕೋಗೆ ಸೇರಿಸಬೇಕೆಂಬ ಆಸೆ ಎಲ್ಲರಲ್ಲೂ ಇತ್ತು. ಅದರಂತೆ ಯುನೆಸ್ಕೋ ತಂಡ ಇಂದು ಬೇಲೂರಿಗೆ ಬಂದು ವೀಕ್ಷಣೆ ಮಾಡುತ್ತಿರುವುದು ನಮಗೆಲ್ಲಾ ಸಂತೋಷ ತಂದಿದೆ. ನಮ್ಮ ದೇವಾಲಯ ಕೂಡ ಯುನೆಸ್ಕೋ ಪಟ್ಟಿಗೆ ಸೇರಲಿ. ನಮಗೆಲ್ಲಾ ಆತಂಕ ಸಹಜವಾಗಿ ಮೂಡಿತ್ತು ಏನೇನು ಬದಲಾವಣೆ ಮಾಡುತ್ತಾರೋ ಎಂದು ಆದರೆ ಯಾವುದೇ ಬದಲಾವಣೆ ಇಲ್ಲ ಸ್ಥಳೀಯರ ಜೊತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಕಾನೂನು ಅಡೆತಡೆಗಳು ಬಂದರೂ ಕೂಡ ಅದನ್ನೆಲ್ಲಾ ನಾವು ಕೂಡ ನಿಮ್ಮಪರವಾಗಿ ಇದ್ದು ಪುರಸಭೆಯೊಂದಿಗೆ ಕೈಜೋಡಿಸುತ್ತೇವೆ ಎಂದು ತಿಳಿಸಿದರು.
ಭಾರತೀಯ ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆ ಅಪರ ಮಹಾ ನಿರ್ದೇಶಕರಾದ ಜಾಹನ್ವಿಜ್ ಶರ್ಮಾ, ಎ.ಎಸ್ ಐ ನಿರ್ದೇಶಕರಾದ ಮದನ್ ಸಿಂಗ್ ಚೌಹಾಣ್, ಪ್ರಾದೇಶಿಕ ನಿರ್ದೇಶಕರಾದ ಡಾ. ಜಿ ಮಹೇಶ್ವರಿ, ಎ.ಎಸ್ ಐ ಅಧಿಕಾರಿಗಳಾದ ಬಿಪಿನ್ ಚಂದ್ರ ಸೋಮಲಾ ನಾಯಕ್, ಶ್ರೀಗುರು ಡಾ ಆರ್.ಎನ್ ಕುಮಾರನ್, ಸುಜನಾ ಸ್ಟೀಫ್ನ್, ಅಭಯ ಕುಮಾರ್, ಗೌತಮ್ , ಶ್ರೀ ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಅಧ್ಯಕ್ಷ ನಾರಾಯಣಸ್ವಾಮಿ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯುಲ್ಲತಾ , ಸಾಹಿತಿ ಶ್ರೀವತ್ಸ ವಟಿ ಮೊದಲಾದವರು ಇದ್ದರು.
ಇದಕ್ಕೂ ಮೊದಲು ಯುನೊಸ್ಕೊ ತಂಡ ದೇಗುಲಕ್ಕೆ ಆಗಮಿಸಿದ ವೇಳೆ ಮುಖ್ಯ ದ್ವಾರದಿಂದ ಮಂಗಳವಾದ್ಯ ಹಾಗೂ ಪೂರ್ಣಕುಂಭ ಸ್ವಾಗತ ದೊಂದಿಗೆ ಬರಮಾಡಿಕೊಳ್ಳಲಾಯಿತು.