ಬೇಲೂರು: ಸುಮಾರು ನಾಲ್ಕು ಬೈಕ್ ಸವಾರರು ಪ್ರತಿ-ನಿತ್ಯ ಬೇಲೂರು ಮುಖ್ಯರಸ್ತೆ ಮೂಲಕ ದೇಗುಲ ರಸ್ತೆ, ಜೆಪಿನಗರ ಸಕಲೇಶಪುರ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿರುವ ಜೊತೆಗೆ ಸೈಲೆನ್ಸರ್ ಇಲ್ಲದ ಬೈಕ್ ನಿಂದ ಹೊರ ಬರುತ್ತಿರುವ ಕರ್ಕಶ ಸದ್ದು ಇಡೀ ಸಾರ್ವಜನಿಕರಿಗೆ ಅಘಾತ ಉಂಟಾಗುತ್ತಿದ್ದರು ಸಂಬಂಧ ಪಟ್ಟ ಪೊಲೀಸರು ಮಾತ್ರ ಜಾಣ ಮೌನಕ್ಕೆ ಜಾರಿದ್ದಾರೆ ಎಂದು ಪಟ್ಟಣದ ಜನತೆ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹೌದು! ಪಟ್ಟಣದ ನೆಹರುನಗರ,ಮುಖ್ಯರಸ್ತೆ, ಬಸವೇಶ್ವರ ವೃತ್ತ, ದೇಗುಲರಸ್ತೆ, ಜೆಪಿನಗರ ಮತ್ತು ಸಕಲೇಶಪುರ ರಸ್ತೆ ವಿಷ್ಣುಸಮುದ್ರ ಕೆರೆ ಏರಿ ಹೀಗೆ ನಾನಾ ಕಡೆ ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ನಿತ್ಯ ಸಂಜೆ 4 ಗಂಟೆ ವೇಳೆ ನಾಲ್ಕು ಬೈಕ್ ಸವಾರರು ಸೈಲೆನ್ಸರ್ ಇಲ್ಲದ ಗಾಡಿಗಳಲ್ಲಿ ಶಬ್ದ ಪ್ರಳಯವನ್ನು ಮಾಡುತ್ತಾ ಅತಿವೇಗದಿಂದ ಹೋಗುವ ಮೂಲಕ ರಸ್ತೆಯಲ್ಲಿನ ವಾಹನಗಳು ಸೇರಿದಂತೆ ಜನತೆಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.
ಸೈಲೆನ್ಸರ್ ನಿಂದ ಹೊರ ಬರುವ ಕರ್ಕಶ ಶಬ್ದ ಕೇಳಿದ ವಯೋವೃದ್ಧರ ಪರಿಸ್ಥಿತಿ ನಿಜಕ್ಕೂ ಹೀನಾಯವಾಗಿದೆ. ಇನ್ನು ಪಡ್ಡೆ ಪುಂಡರು ತರುಣಿರನ್ನು ಕಂಡ ಕೂಡಲೇ ಬೈಕ್ ವ್ಹೀಲಿಂಗ್ ಮುಂದಾಗಿ ಹೀರೊ ತರಹ ಪೋಸು ನೀಡುತ್ತಿದ್ದಾರೆ. ಯಗಚಿ ಸೇತುವೆ ಮೇಲೆ ಇವರ ಹೋಗುವ ವೇಗಕ್ಕೆ ಉಳಿದ ವಾಹನಗಳೇ ತಟಸ್ಥವಾಗಿ ದಾರಿ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಎಷ್ಟೋ ಭಾರಿ ಪಟ್ಟಣದ ಪೊಲೀಸರಿಗೆ ವಿಷಯವನ್ನು ಸಾರ್ವಜನಿಕ ಸಭೆಯಲ್ಲಿ ತಿಳಿಸಿದರೂ ಕೂಡ ಪೊಲೀಸರು ಮಾತ್ರ ಕೈಚೆಲ್ಲಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.
ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಪ್ರಬುದ್ದ ಮತದಾರರ ಸಭೆಯಲ್ಲಿ ಸ್ವತಃ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣಶೆಟ್ಟಿ ಬಣ) ತಾಲ್ಲೂಕು ಅಧ್ಯಕ್ಷ ವಿ.ಎಸ್.ಬೋಜೇಗೌಡ ಮಾತನಾಡಿ, ಬೇಲೂರು ಮುಖ್ಯರಸ್ತೆ,ದೇಗುಲರಸ್ತೆಯಲ್ಲಿ ಬೈಕ್ ಸವಾರರು ವ್ಹೀಲಿಂಗ್ ಮಾಡುತ್ತಾ ಕರ್ಕಶ ಶಬ್ದದ ಮೂಲಕ ಕಿರಿಕಿರಿ ಉಂಟು ಮಾಡಿದರೂ ಕೂಡ ಪೊಲೀಸರು ಮಾತ್ರ ಮೌನಕ್ಕೆ ಜಾರಿದ್ದಾರೆ ಎಂದು ಸಭೆಯಲ್ಲಿ ಗಂಭೀರವಾಗಿ ಯೇ ಪ್ರಸ್ತಾಪಿಸಿದ ಸಂದರ್ಭದಲ್ಲಿ ಪ್ರಬುದ್ದ ಮತದಾರರು ಚಪ್ಪಾಳೆ ಮೂಲಕ ಬೈಕ್ ವ್ಹೀಲಿಂಗ್ ಕಡಿವಾಣ ಹಾಕಬೇಕು ಎಂದು ಬೆಂಬಲ ನೀಡುವ ಜೊತೆಗೆ ಶಾಸಕ ಹೆಚ್.ಕೆ.ಸುರೇಶ್ ಕೂಡ ಈ ಬಗ್ಗೆ ಭಾರಿ ದೂರು ಬಂದಿದೆ. ಪೊಲೀಸರು ಕೇವಲ ಮರಳು ಲಾರಿ, ಕಲ್ಲಿನ ಲಾರಿಗಳನ್ನು ಗಮನಿಸದಂತೆ ಪಟ್ಟಣದ ವಾಹನ ದಟ್ಟನೆ ಹಾಗೂ ಬೈಕ್ ಸವಾರರ ವ್ಹೀಲಿಂಗ್ ಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಲು ಜನತೆ ಭರವಸೆ ನೀಡಿದ್ದಾರೆ.