ಹಾಸನ: ಬುಧವಾರದಂದು ದೇವಿಗೆ ಮಹಾ ನೈವೇದ್ಯ ಅರ್ಪಿಸುವ ಸಮಯ ಹೊರತುಪಡಿಸಿ ಅಕ್ಟೋಬರ್ 26 ರ ಬುಧವಾರ ಬೆಳಿಗ್ಗೆ 6.00 ರಿಂದ ಅಕ್ಟೋಬರ್ 27 ರ ಗುರುವಾರ ಬೆಳಿಗ್ಗೆ 7.00 ರವರೆಗೆ ನಿರಂತರವಾಗಿ ಹಾಸನಾಂಬೆ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
ಭಕ್ತರಿಗೆ ದರ್ಶನ ಮುಗಿಸಿ ನಂತರ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚುವ ಮೂಲಕ ದೇವಿಯ ಆಭರಣಗಳನ್ನು ತೆಗೆಯಲಾಗುವುದು.
ಮಂಗಳವಾರ ಅಕ್ಟೋಬರ್ 25 ರಂದು ಸೂರ್ಯಗ್ರಹಣದ ನಿಮಿತ್ತ ಶ್ರೀ ಹಾಸನಾಂಬ ದೇವಸ್ಥಾನವನ್ನು ಇಡೀ ದಿನ ಮುಚ್ಚಲಾಗಿತ್ತು. ಪೊಲೀಸ್ ಸಿಬ್ಬಂದಿ ಹೊರತು ಪಡಿಸಿ ಭಕ್ತರು ದೇವಸ್ಥಾನದತ್ತ ಸುಳಿಯದ ಕಾರಣ ದೇವಸ್ಥಾನದ ಒಳ ಹೊರ ಆವರಣಗಳು ನಿರ್ಜನವಾಗಿದ್ದವು.
ಅಕ್ಟೋಬರ್ 13 ರಿಂದ ವರ್ಷಕ್ಕೊಮ್ಮೆ ತೆರೆಯುವ ಶ್ರೀ ಹಾಸನಾಂಬ ದೇವಾಲಯದ ಬಾಗಿಲು ನಂತರ ಪ್ರತಿದಿನ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು.
ಸೂರ್ಯಗ್ರಹಣದ ಕಾರಣ ಮಂಗಳವಾರ ಬೆಳಗ್ಗೆ 6.00 ಗಂಟೆಯಿಂದ ದೇವಸ್ಥಾನವನ್ನು ಮುಚ್ಚಲಾಗಿದ್ದು, ಮುಖ್ಯ ದ್ವಾರ ಸೇರಿದಂತೆ ಎಲ್ಲಾ ದ್ವಾರಗಳ ಬಾಗಿಲುಗಳಿಗೆ ಬೀಗ ಹಾಕಲಾಗಿತ್ತು.