ಅರಸೀಕೆರೆ: ನಗರದ ಬಸ್ ನಿಲ್ದಾಣದಿಂದ ದಿನನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತಿದ್ದು ಪ್ರತಿ ದಿನ ಸುಮಾರು ಆರು ಲಕ್ಷಕ್ಕೂ ಹೆಚ್ಚು ಆದಾಯ ತಂದು ಕೊಡುತ್ತಿದೆ. ಒಂದು ವರ್ಷಕ್ಕೆ ಕನಿಷ್ಠ ೨೦ ಕೋಟಿ ರೂ. ಕಲೆಕ್ಷನ್ ತಂದು ಕೊಡುವ ಪ್ರತಿಷ್ಠಿತ ನಿಲ್ದಾಣದಲ್ಲಿ ಕನಿಷ್ಠ ಮೂಲ ಭೂತ ಸೌಲಭ್ಯ ಒದಗಿಸಲು ಅಧಿಕಾರಿಗಳು ವಿಫಲವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.
ರಾಜ್ಯದ ರೈಲ್ವೆ ಜಂಕ್ಷನ್ ಕೇಂದ್ರಗಳಲ್ಲಿ ಒಂದಾಗಿರುವ ಅರಸೀಕೆರೆಗೆ ಪ್ರತಿದಿನ ರಾಜ್ಯದ ವಿವಿಧ ಪ್ರದೇಶ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಪ್ರಯಾಣಿಕರು ಹಗಲು ರಾತ್ರಿ ಎನ್ನದೆ ಆಗಮಿಸುತ್ತಾರೆ. ಈ ನಿಲ್ದಾಣ ಕಳೆದ ೧೦ ವರ್ಷಗಳ ಹಿಂದೆ ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಕಲೆಕ್ಷನ್ ತಂದು ಕೊಡುವ ನಿಲ್ದಾಣ ಎಂಬ ದಾಖಲೆ ನಿರ್ಮಿಸಿತ್ತು. ಇಂತಹ ನಿಲ್ದಾಣದಲ್ಲಿ ಪ್ರಯಾಣಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಕುಡಿಯಲು ನೀರು ಸಿಗುವುದಿಲ್ಲ ಇಲ್ಲಿನ , ಇನ್ನು ಸ್ವಚ್ಛತೆ ಕೇಳುವಂತೆಯೇ ಇಲ್ಲ.
ಬಸ್ ನಿಲ್ದಾಣದ ಪ್ರವೇಶ ದ್ವಾರವನ್ನು ಪ್ರಯಾಣಿಕರು ವಾಹನ ನಿಲ್ಲಿಸುತ್ತಾರೆ ಎಂದು ಬಂದ್ ಮಾಡಲಾಗಿದೆ ಇದ್ದರಿಂದ ವೃದರು ಅಂಗವಿಕಲರು ಬಸ್ ನಿಲ್ದಾಣಕ್ಕೆ ಬರಲು ಪರಿತಪಿಸಬೇಕಾಗಿದೆ. ಪ್ರಯಾಣಿಕರ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡುವುದು ಕನಿಷ್ಠ ಸೌಲಭ್ಯಗಳಲ್ಲಿ ಒಂದು ಎಂಬುದನ್ನೆ ಮರೆತಿರುವ ಅಧಿಕಾರಿಗಳು ಪಾರ್ಕಿಂಗ್ ವ್ಯವಸ್ಥೆಗಾಗಿ ಇರುವ ಜಾಗವನ್ನು ಖಾಲಿ ಬಿಟ್ಟು ವಾಹನ ನಿಲುಗಡೆಗೆ ಅವಕಾಶವಿಲ್ಲದಂತೆ ಬಂದ್ ಮಾಡಿರುವುದು ಸೋಜಿಗದ ಸಂಗತಿ.
ಹೆಚ್ಚು ವಾಹನಗಳ ನಿಲುಗಡೆ ಯಿಂದ ಪ್ರಯಾಣಿಕರಿಗೆ ತೊಂದರೆಯಾಗಿದ್ದರೆ ಅದಕ್ಕೆ ಬದಲಿ ವ್ಯವಸ್ಥೆ ಮಾಡಿ ಸಿಬ್ಬಂದಿಯನ್ನು ನೇಮಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಇಲ್ಲವೇ ಪಾರ್ಕಿಂಗ್ ಅನ್ನು ಗುತ್ತಿಗೆ ನೀಡಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ವಾಹನ ನಿಲುಗಡೆ ಮಾಡುವಂತೆ ನಿಬಂಧನೆ ವಿಧಿಸಿ ಪಾರ್ಕಿಂಗ್ ಗುತ್ತಿಗೆಗೆ ನೀಡಿದರೆ ಅದರಿಂದ ಸಂಸ್ಥೆಗೂ ಆದಾಯ ಬರುತ್ತದೆ ಪ್ರಯಾಣಿಕರಿಗೂ ಅನುಕೂಲ ಕಲ್ಪಿಸಿದಂತೆಯಾಗುತದೆ. ಅದನ್ನು ಬಿಟ್ಟು ಪ್ರವೇಶ ದ್ವಾರವನ್ನು ಬಂದ್ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.
ಪದೇ ಪದೇ ಕೋಟ್ಯಂತರ ರೂ ವೆಚ್ಚದಲ್ಲಿ ನಿಲ್ದಾಣವನ್ನು ಆಧುನಿಕರಿಸಲಾಗುತ್ತಿದೆ ಆದರೂ ಶೌಚಾಲಯವನ್ನು ಆಧುನಿಕರಿಸಿಲ್ಲ. ಮೂತ್ತಾಲಯದಲ್ಲಿ ಒಬ್ಬರು ಹೋದ ನಂತರ ಸ್ವಚ್ಛಗೊಳಿಸುವ ಯಾವುದೇ ಸೌಲಭ್ಯವಿಲ್ಲ. ಅಲ್ಲಿ ಹೋದವರು ಸಾಂಕ್ರಾಮಿಕ ರೋಗದ ಭೀತಿಯಿಂದಲೇ ಹೊರಬರುವ ಪರಿಸ್ಥಿತಿ ಇದೆ.
ನಿಲ್ದಾಣದಲ್ಲಿ ಶುದ್ಧ ನೀರಿನ ಯಂತ್ರವನ್ನು ಅಳವಡಿಸಲಾಗಿದೆ ಆದರೂ ಅದು ಕೆಟ್ಟು ೬ ತಿಂಗಳಾದರು ರಿಪೇರಿ ಮಾಡಿಸುವ ಗೋಜಿಗೆ ಯಾರು ಹೋಗಿಲ್ಲ. ಈ ಬೇಸಿಗೆ ಬಿಸಿಲಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಜನ ಹಣವಿದ್ದವರು ಬಾಟಲಿ ನೀರು ಪಡೆಯುತ್ತಾರೆ ಹಣ ವಿಲ್ಲದವರು ಬಾಯಾರಿಕೆಯಿಂದ ಬಳಲಿ ಸಾರಿಗೆ ಸಂಸ್ಥೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಶಾಪ ಹಾಕಿ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ಸಾರಿಗೆ ಸಚಿವರಾಗಿದ ಡಿ. ಸಿ. ತಮ್ಮಯ್ಯ ಶಾಸಕ ಕೆ. ಎಂ. ಶಿವಲಿಂಗಗೌಡ ಅವರೊಡನೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿ ನಿಲ್ದಾಣ ಕಿರಿದಾಗಿರುವುದರಿಂದ ಗ್ರಾಮೀಣ ಬಸ್ ನಿಲ್ದಾಣವನ್ನು ಪಕ್ಕದ ಪಶು ಆಸ್ಪತ್ರೆಗೆ ಬದಲಾಯಿಸಿ ಈಗಿರುವ ನಿಲ್ದಾಣವನ್ನು ಬೆಂಗಳೂರು ನಿಲ್ದಾಣದಂತೆ ಸಂಪೂರ್ಣ ಆಧುನಿಕರಿಸಲಾಗುವುದು ಎಂದು ಹೇಳಿದ್ದರು ಅ ನಿಟ್ಟಿನಲ್ಲಿ ಪಕ್ಕದಲ್ಲಿದ ಪಶು ಆಸ್ಪತ್ರೆ ಖಾಲಿಯಾಗಿ ನೂತನ ಆಸ್ಪತ್ರೆಯು ಸಿದ್ದವಾಗಿದೆ ಆದರೆ ಇದುವರೆಗೆ ಸಾರಿಗೆ ಸಂಸ್ಥೆಯ ಕಟ್ಟಡ ನಿರ್ಮಾಣ ಆರಂಭವಾಗಿಲ್ಲ. ಮಾಜಿ ಸಾರಿಗೆ ಸಚಿವರಾದ ಡಿ. ಸಿ. ತಮ್ಮಯ್ಯ ಮದ್ದೂರಿನ ರಾಜ್ಯ ಪತ್ರಕರ್ತರ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮಾತನಾಡಿದ್ದು ನಿಲ್ದಾಣದ ಕಾಮಗಾರಿಗೆ ಸರ್ಕಾರ ಅನುಮೋದನೆ ನೀಡಿದ್ದು ಯಾವುದೇ ಸರ್ಕಾರವಿರಲ್ಲಿ ಅದು ಜಾರಿಗೆ ಬಂದೆ ಬರುತ್ತದೆ ಎಂದು ಹೇಳಿದ್ದರು. ಆದರೆ ಇದುವರೆಗೆ ಕಾಮಗಾರಿ ಆರಂಭವಾಗುವ ಯಾವುದೇ ಲಕ್ಷಣ ಕಂಡು ಬಂದಿಲ್ಲ.