ಆಲೂರು: ರೈತರು,ಬಡವರು, ಅಲ್ಪಸಂಖ್ಯಾತರು ನೆಮ್ಮದಿಯಿಂದ ಬದುಕಲು ಮಾಜಿ ಪ್ರಧಾನಮಂತ್ರಿ ದೇವೇಗೌಡರು ನೀಡಿದ ಕಾರ್ಯಕ್ರಮ ಕಾರಣ.ಆದ್ದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮಾಜಿ ಸಚಿವ, ಶಾಸಕ ಎಚ್.ಡಿ. ರೇವಣ್ಣ ಮನವಿ ಮಾಡಿದರು.
ಪಟ್ಟಣದ ವಕ್ಕಲಿಗರ ಸಮುದಾಯ ಭವನದಲ್ಲಿ ಗುರುವಾರ ತಾ. ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಎಚ್.ಡಿ.ದೇವೇಗೌಡರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಮೀಸಲಾತಿ ಆಧಾರದಲ್ಲಿ ಅಲ್ಪಸಂಖ್ಯಾತರು, ಅನೇಕ ಹಿಂದುಳಿದ ಸಮುದಾಯದಗಳಿಗೆ ರಾಜಕೀಯ ಶಕ್ತಿ ಬಂತು. ಶ್ರೀರಾಮುಲು ಸೇರಿದಂತೆ ೧೮ ಜನ ಶಾಸಕರಾದರು. ಇಬ್ಬರು ಸಂಸದರಾದರು. ಇದು ದೇವೇಗೌಡರ ಶಕ್ತಿಯಲ್ಲವೆ? ಈಗ ಒಳ ಮೀಸಲಾತಿಗೆ ಹೋರಾಟ ಮಾಡಲಾಗುತ್ತಿದೆ.
ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಿದರು. ವೈದ್ಯಕೀಯ ಇಂಜಿನಿಯರಿಂಗ್ ಸೇರಲು ಅರ್ಹತೆ ಆಧಾರದಲ್ಲಿ ಉಚಿತ ಪ್ರವೇಶ ಮಾಡಲಾಗಿತ್ತು.ಕಾಡೊಳಗೆ ಇದ್ದ ಒಂದೊಂದು ಮನೆಗೂ ವಿದ್ಯುತ್ ಸಂಪರ್ಕ ಕೊಟ್ಟಿದ್ದೇವೆ. ಈಗಿರುವ ಸರ್ಕಾರ ಡಬಲ್ ಇಂಜಿನ್ ಕಮಿಷನ್ ಸರ್ಕಾರವಾಗಿದೆ. ೨೦ ವರ್ಷಗಳಿಂದ ಹಾಸನ-ಬಿ.ಸಿ. ರೋಡ್ ರಾಷ್ಟೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿಲ್ಲ.
ಹಾಸನ-ಆಲೂರು-ಬೇಲೂರು-ಚಿಕ್ಕಮಗಳೂರು ರೈಲ್ವೆ ಕಾಮಗಾರಿ ಮುಗಿದ ನಂತರ ಆಲೂರು ರೈಲ್ವೆ ನಿಲ್ದಾಣದಲ್ಲಿ ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಇಂಧನ ಇಲಾಖೆ ಈಗಾಗಲೆ ೨೮೦೦ ಕೋಟಿ ರೂ. ನಷ್ಟದಲ್ಲಿದೆ. ಕಾಂಗ್ರೆಸ್ ಪಕ್ಷದವರು ಎಲ್ಲಿಂದ ೨೦೦ ಯೂನಿಟ್ ವಿದ್ಯುತ್ ತಂದು ಉಚಿತವಾಗಿ ಕೊಡುತ್ತಾರೆ?. ಸುಳ್ಳು ಭರವಸೆ ನೀಡುವುದನ್ನು ಕೈ ಬಿಡಬೇಕು ಎಂದರು.ಸಭೆಯಲ್ಲಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಸಭೆಯಲ್ಲಿ ತಾ. ಜೆಡಿಎಸ್ ಅಧ್ಯಕ್ಷ ಕೆ. ಎಸ್. ಮಂಜೇಗೌಡ, ಬಿ. ಸಿ. ಶಂಕರಾಚಾರ್ ಮಾತನಾಡಿದರು.
ಮುಖಂಡರಾದ ಸಿ.ವಿ. ಲಿಂಗರಾಜು, ಲಿಂಗರಾಜು, ನಟರಾಜ್, ಕೃಷ್ಣೇಗೌಡ, ಮಗ್ಗೆ ಕಾಂತರಾಜು, ಪಾಳ್ಯ ಪ್ರಕಾಶ್, ಗೋಪಾಲಕೃಷ್ಣ, ಬಸವರಾಜು, ಮಲ್ಲಿಕಾರ್ಜುನ, ವಕೀಲ ಮಹೇಂದ್ರ, ಯೋಗಣ್ಣ ಹಾಜರಿದ್ದರು.