ಹಾಸನ: ಮುಂದಿನ ದಿನಗಳಲ್ಲಿ ಅಲ್ಪ ಸಂಖ್ಯಾಂತರೇ ಕಾಂಗ್ರೆಸ್ ಪಕ್ಷವನ್ನು ಮುಗಿಸುತ್ತಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭವಿಷ್ಯ ನುಡಿದಿದ್ದಾರೆ.
ನಗರದ ಆರ್.ಸಿ. ರಸ್ತೆ ಬಳಿಯಿರುವ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, 2023ಕ್ಕೆ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಜೆಡಿಎಸ್ ಪಕ್ಷದ ಗುರಿಯಾಗಿದೆ ಎಂದರಲ್ಲದೆ, ಜೆಡಿಎಸ್ ಪಕ್ಷಕ್ಕೆ ನೆಲೆ ಇಲ್ಲ ಎಂದು ನಮ್ಮನ್ನು ಟೀಕೆ ಮಾಡುತ್ತಿದ್ದವರಿಗೆ ಜನರು ತಕ್ಕ ಉತ್ತರ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಪರ್ಸಂಟೇಜ್ ವ್ಯವಸ್ಥೆ ಜಾರಿಗೆ ಬಂದಿದ್ದು, ಎರಡು ರಾಷ್ಟ್ರೀಯ ಪಕ್ಷಗಳು ಕಮಿಷನ್ ಗಾಗಿ ಗುದ್ದಾಡುತ್ತಿವೆ. ಎರಡು ರಾಷ್ಟ್ರೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ನೀರಾವರಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು. ದೇವೇಗೌಡರು ಭ್ರಷ್ಟರಾ? ಕಾಂಗ್ರೆಸ್ ನವರು ಏಕೆ ಪ್ರಧಾನಿ ಪದವಿಯಿಂದ ಕೆಳಗಿಳಿಸಿದರು? ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದಲ್ಲಿ ಉಪಯೋಗ ಪಡೆದು ಅವರನ್ನು ಮುಗಿಸಲು ಪ್ರಯತ್ನಪಟ್ಟರು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಮಾನ ಮರ್ಯಾದೆ ಇದ್ದರೇ ಕಾಂಗ್ರೆಸ್ ಮೀಸಲಾತಿಯಡಿ ಅಧಿಕಾರವನ್ನು ಹಂಚಿಕೆ ಮಾಡಲಿ. ಕಾಂಗ್ರೆಸ್ ತಪ್ಪು ಮಾಡಿದ್ದರೆ ಫಾದರ್ ಹತ್ತಿರ ಹೋಗಿ ತಪ್ಪು ಕಾಣಿಕೆ ಕೊಟ್ಟು ಕ್ಷಮೆಯಾಚಿಸಲಿ. ಕಾಂಗ್ರೆಸ್ ದೇಶಬಿಟ್ಟು ಹೋಗುವ ತನಕ ಅಭಿವೃದ್ದಿಯಾಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.