ಹಾಸನ :ನಗರದ ಎಂ .ಜಿ. ರಸ್ತೆಯಲ್ಲಿ ನಿರ್ಮಾಣವಾಗಿ ಉದ್ಘಾಟನೆಗೆ ಸಿದ್ಧತೆಯಲ್ಲಿರುವ ಫುಡ್ ಕೋರ್ಟ್ನಲ್ಲಿ ಹಾಕಲಾಗಿದ್ದ ಶಾಸಕ ಪ್ರೀತಂಗೌಡ ಭಾವಚಿತ್ರಕ್ಕೆ ರಾತ್ರೋರಾತ್ರಿ ದುಷ್ಕರ್ಮಿಗಳು ಕಲ್ಲು ಹೊಡೆದು ಮೂರು ಕಡೆಯಲ್ಲಿ ಛಿದ್ರಗೊಳಿಸಿ ಹಾನಿ ಮಾಡಿದ್ದು, ಈ ಕೃತ್ಯವನ್ನು ಖಂಡಿಸಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಈ ಕುರಿತಂತೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ ಎಂ.ಜಿ. ರಸ್ತೆಯಲ್ಲಿ ನಿರ್ಮಿಸಿರುವ ಫುಡ್ ಕೋರ್ಟ್ಗೆ ಕೆಲ ದಿನಗಳ ಹಿಂದೆಯಷ್ಟೆ ಶಾಸಕ ಪ್ರೀತಮ್ ಜೆ. ಗೌಡರ ಭಾವಚಿತ್ರವನ್ನು ಹಾಕಲಾಗಿತ್ತು. ಆದರೆ ಶಾಸಕರ ಜನಪ್ರಿಯತೆ ಸಹಿಸಲಾಗದೆ ಯಾರೋ ಕಿಡಿಗೇಡಿಗಳು ಕಲ್ಲು ಹೊಡೆದು ಭಾವಚಿತ್ರ ಮತ್ತು ಲೈಟನ್ನು ಹಾಳು ಮಾಡಿದ್ದಾರೆ. ಶಾಸಕರಾಗಿ ಬಂದ ಪ್ರೀತಂ ಗೌಡರು ಇದುವರೆಗೂ ಸುಮಾರು 600 ಕೋಟಿಗಳಷ್ಟು ಅಧಿಕ ಹಣವನ್ನು ಹಾಸನ ಕ್ಷೇತ್ರದ ಅಭಿವೃದ್ಧಿಗಾಗಿ ತಂದು ಕಾಮಗಾರಿ ನಡೆಸಿದ್ದಾರೆ. ಒಳ್ಳೆ ಕೆಲಸವನ್ನು ಸಹಿಸದ ವಿರೋಧ ಪಕ್ಷದವರು ಈ ಕೃತ್ಯ ಎಸಗಿರುವುದಾಗಿ ದೂರಿದರು.
ಸಿಸಿ ಟಿವಿಯಲ್ಲಿ ಕಲ್ಲು ಎಸೆದಿರುವ ದೃಶ್ಯಗಳು ದಾಖಲಾಗಿದ್ದು, ಇಬ್ಬರು ವ್ಯಕ್ತಿಗಳು ಸೇರಿ ಈ ದುಷ್ಕೃತ್ಯ ನಡೆಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಬಡಾವಣೆ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಶೀಘ್ರವೇ ಇಬ್ಬರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದರು. ಯಾರು ಏನೆ ಮಾಡಿದರೂ 2023ರ ವಿಧಾನ ಸಭಾ ಚುನಾವಣೆಯಲ್ಲಿ ಪ್ರೀತಮ್ ಜೆ. ಗೌಡರು ಮತ್ತೆ ಆಯ್ಕೆ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಸಾಲಗಾಮೆ ರಸ್ತೆ ಬಳಿ ಇರುವ ಬೃಹತ್ ಫುಡ್ ಕೋರ್ಟ್ ನಿರ್ಮಾಣ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದರು. ಈಗ ಅದೇ ಮಾದರಿಯಲ್ಲಿ ಎಂ.ಜಿ. ರಸ್ತೆಯಲ್ಲಿಯೂ ನಿರ್ಮಾಣ ಮಾಡಿ ಉದ್ಘಾಟನೆಯಾಗುವ ಹಂತಕ್ಕೆ ತಲುಪಿದ ಸಮಯದಲ್ಲಿ ಪ್ರೀತಮ್ ಜೆ. ಗೌಡರ ಭಾವಚಿತ್ರಕ್ಕೆ ಕಲ್ಲು ಎಸೆದು ಹಾನಿ ಉಂಟು ಮಾಡಲಾಗಿದೆ ಎಂದು ಹೇಳಿದರು.