ಹಾಸನ: ಸಿನಿಮಾ ನಟರೆಂದರೆ ಕೇವಲ ತಮ್ಮ ಸ್ವಂತಕ್ಕೆ ಹಣ ಮಾಡಿಕೊಳ್ಳುತ್ತಾರೆ ಎಂಬ ಮಾತಿದೆ. ಆದರೆ ಅದಕ್ಕೆ ತದ್ವಿರುದ್ಧ ಎಂಬಂತೆ ಇತ್ತೀಚೆಗೆಷ್ಟೇ ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಡಿರುವ ಸಮಾಜಮುಖಿ ಕೆಲಸಗಳು ಅವರು ನಿಧನದ ನಂತರ ಒಂದೊಂದಾಗಿ ಹೊರ ಬರುತ್ತಿವೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ರಾಮಕೃಷ್ಣ-ಜ್ಯೋತಿ ಎಂಬುವವರ ಪುತ್ರ ಗಿರೀಶ್ ಕುಮಾರ್ ಜಿ.ಆರ್. ಹಾಸನದ ರಾಜೀವ್ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ಓದುತ್ತಿದ್ದಾನೆ. ಗಿರೀಶ್ ತಂದೆ ರಾಮಕೃಷ್ಣ ರೈತರಾಗಿದ್ದು ಇದ್ದ ಅಲ್ಪಸ್ವಲ್ಪ ಜಮೀನಿನಲ್ಲಿ ರಾಗಿ ಬೆಳೆದಿದ್ದರು. ಆದರೆ ಕಳೆದ ಒಂದು ತಿಂಗಳಿನಿಂದ ಸುರಿದ ಅಕಾಲಿಕ ಮಳೆಗೆ ರಾಗಿ ಸಂಪೂರ್ಣ ನಾಶವಾಗಿ ಬಡಕುಟುಂಬ ಕಂಗಾಲಾಗಿ, ಸಂಕಷ್ಟಕ್ಕೆ ಸಿಲುಕಿತ್ತು. ಇತ್ತ ಮಗ ಹೊರ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಆತನ ಪರೀಕ್ಷೆಗೆ ಫೀಸ್ ಕಟ್ಟಲು ಹಣವಿಲ್ಲದೆ ಪರದಾಡುವಂತಾಗಿತ್ತು. ಗಿರೀಶ್ ಪರೀಕ್ಷೆಗೆ ಹಾಜರಾಗಲು 21,500 ರೂ ಶುಲ್ಕ ಕಾಲೇಜಿಗೆ ಪಾವತಿಸಬೇಕಿತ್ತು. ಆದರೆ ಶುಲ್ಕ ಕಟ್ಟಲಾಗದೆ ಪರೀಕ್ಷೆ ಬರೆಯಲಾಗದ ಆತಂಕ ಎದುರಾಗಿತ್ತು. ಎಲ್ಲರ ಬಳಿ ಹಣ ಕೇಳಿದರೂ ಯಾರೂ ನೀಡಿರಲಿಲ್ಲ.
ಕೊನೆಗೆ ಗಿರೀಶ್ ಹಾಸನ ಜಿಲ್ಲಾ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರನ್ನು ಸಂಪರ್ಕ ಮಾಡಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾನೆ. ಕೂಡಲೇ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಖುದ್ದು ಸುದೀಪ್ ಅವರೇ ಸ್ಪಂದಿಸಿದ್ದಾರೆ. ಇಂದು ಗಿರೀಶ್ ನನ್ನು ಬೆಂಗಳೂರಿಗೆ ಕರೆಸಿಕೊಂಡು ಗಿರೀಶ್ ಕುಟುಂಬದ ಕಷ್ಟ ಆಲಿಸಿ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ವತಿಯಿಂದ 21,500 ಚೆಕ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಪರೀಕ್ಷೆ ಬರೆಯಲಾಗದ ಆತಂಕ ಗಿರೀಶ್ ನಿಂದ ದೂರವಾಗಿದ್ದು ನಾಳೆ ಬೆಳಗ್ಗೆ ಶುಲ್ಕ ಪಾವತಿಸಿ ರಾಜೀವ್ ಕಾಲೇಜಿನಲ್ಲಿ ಗಿರೀಶ್ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಸಿನಿಮಾ ನಟರು ಮಾತ್ರ ತೆರೆಮರೆಯಲ್ಲಿ ಬಡವರ ನೆರವಿಗೆ ನಿಲ್ಲುತ್ತಿರುವುದು ನಿಜಕ್ಕೂ ಪ್ರಶಂಸನೀಯವಾದದ್ದು. ಎಲ್ಲಾ ನಟರು ಈ ರೀತಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಅದೆಷ್ಟೋ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ.