ಹಾಸನ : 2023 ವಿಧಾನಸಭಾ ಚುನಾವಣೆಗೆ ತಯಾರಿ ನಡೆದಿದ್ದು, ಮಾರ್ಚ್ ತಿಂಗಳಲ್ಲಿ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ನಗರಕ್ಕೆ ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಿಕೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇದುವರೆಗೂ ನಾನು ಹಾಸನ ಜಿಲ್ಲೆಯ ರಾಜಕೀಯ ಬಗ್ಗೆ ಮೂಗು ತೂರಿಸಿಲ್ಲ. ಈ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ವೊಂದನ್ನು ಸೂಕ್ಷ್ಮವಾಗಿ ತೆಗೆದುಕೊಳ್ಳುತ್ತೇನೆ. ಆದರೆ ನಾನು ಸಿಎಂ ಆಗಿದ್ದ ವೇಳೆ ಹಾಸನ ಜಿಲ್ಲೆಗೆ ದೊಡ್ಡಮಟ್ಟದಲ್ಲಿ ಕೆಲಸ ಮಾಡಿದ್ದೇನೆ. ಹಾಸನ ವಿಧಾನಸಭಾ ಕ್ಷೇತ್ರದ ಬಗ್ಗೆ ನಾನೇ ಸಲಹೆ ನೀಡುತ್ತೇನೆ. ನಮ್ಮ ಕುಟುಂಬದವರು ಸ್ಪರ್ಧಿಸುತ್ತಾರೆ ಎನ್ನುವುದು ಊಹಾಪೋಹ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ನಿಷ್ಠಾವಂತ ಮುಖಂಡರಿದ್ದಾರೆ. ಅವರೊಟ್ಟಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ಒಂದೂವರೆ ತಿಂಗಳಿನಲ್ಲಿ ಮೊದಲ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಢುವುದಾಗಿಯೂ ಅದರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸುವುದಾಗಿ ಹೇಳಿದರು.
ಕಳೆದ ಎರಡು ವರ್ಷಗಳ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಆ ಸಂದರ್ಭ ಉತ್ತಮ ಸಲಹೆ ಕೊಟ್ಟು ಜನಪರ ಸರ್ಕಾರ ನಡೆಸಲು ಸಹಕಾರ ನೀಡೋದಾಗಿ ಹೇಳಿದ್ದೆನು. ಕಲಾಪಗಳಲ್ಲಿ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸೋ ನಿಟ್ಟಿನ ಚರ್ಚೆ ಆಗಿರುವುದಿಲ್ಲ. ಪ್ರತಿ ಬಾರಿಯೂ ಸದನದ ಸಮಯ ಬೇಡದ ವಿಚಾರಗಳಿಗೆ ಹಾಳಾಗುತ್ತಿದೆ. ನಾನು ಈ ಬಾರಿ ಸಕ್ರಿಯವಾಗಿ ಸದನದಲ್ಲಿ ಭಾಗಿಯಾಗಬೇಕೆಂದಿದ್ದೇನೆ. ರಾಮನಗರ ಕ್ಷೇತ್ರದ ನಗರ ಪ್ರದೇಶದ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಹೋದಾಗ ಹಲವು ಮಾಹಿತಿ ಸಿಕ್ಕಿದ್ದು, ರಾಮನಗರ ಮಂಡ್ಯ ಪ್ರಾಧಿಕಾರದಲ್ಲಿ 26 ಕೋಟಿ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಿದ್ದೇವೆ ಎಂದು ಹಣ ಹೊಡೆದಿದ್ದಾರೆ.
ಕಾಂಗ್ರೆಸ್ ನವರು ಈಗಿನ ಸರ್ಕಾರವನ್ನು ಲೂಟಿ ಸರ್ಕಾರ ಅಂತಾರೆ. ಆದರೆ ಆ ಪ್ರಕರಣಗಳಲ್ಲಿ ಸಿಬಿಐಗೆ ಕೊಟ್ಟರೂ, ಈ ಕ್ಷಣದ ವರೆಗೆ ಒಂದೇ ಒಂದು ರೂಪಾಯಿ ಹಣ ವಾಪಸ್ ಬಂದಿಲ್ಲ. ನಾನು ಆಗಲೆ ಸಿದ್ದರಾಮಯ್ಯ ಸರ್ಕಾರಕ್ಕೆ ಹೇಳಿದ್ದೆನು. ರಾಜ್ಯದ ವಿವಿಧ ಇಲಾಖೆ ಹಣವನ್ನು ಖಾಸಗಿ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದೇವೆಂದು ಹೇಳ್ತಿರೊ ಹಣ ಖಜಾನೆಗೆ ವಾಪಸ್ ತಗೊಳಿ ಎಂದರು. ಆದರೆ ಅವರು ಏನನ್ನು ಮಾಡಲಿಲ್ಲ. ಅಂದು ಅಯುಕ್ತರಾಗಿದ್ದವರಿಗೆ ಮತ್ತೆ ಉತ್ತಮ ಇಲಾಖೆಯಲ್ಲಿ ದೊಡ್ಡ ದೊಡ್ಡ ಹುದ್ದೆ ಕೊಟ್ಟರು. ನಾಡಿನಲ್ಲಿ ದರೋಡೆ ಯಾವ ರೀತಿ ನಡೆಯುತ್ತಿದೆ ಎಂದು ದೂರಿದರಲ್ಲದೆ, ಅರಕಲಗೂಡು ಕ್ಷೇತ್ರದ ಕೆಲ ಕಾರ್ಯಕರ್ತರು ಹಾಗೂ ಶಾಸಕರ ನಡುವೆ ಹೊಂದಾಣಿಕೆ ಕೊರತೆ ವಿಚಾರ ಇದ್ಯಾವುದು ನನ್ನ ಗಮನಕ್ಕೆ ಬಂದಿಲ್ಲ. ಮೊದಲಿನಿಂದಲೂ ನಾನು ಹಾಸನ ಜಿಲ್ಲೆ ರಾಜಕಾರಣಕ್ಕೆ ಸಂಬಂಧಿಸಿದಂತೆ ನನ್ನ ನೇರ ಪಾತ್ರ ಇಲ್ಲ ಎಂದು ಹೇಳಿದರು.