ಹಾಸನ : ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಂತಹ ವಿಚಾರಗಳು, ಪಠ್ಯಗಳು ಶಾಲೆಗಳಲ್ಲಿ ಇರಬೇಕು ಎಂದು ರಾಜ್ಯದ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರದ ಕುರಿತಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಗವದ್ಗೀತೆಯನ್ನು ಕುಟುಂಬದಲ್ಲೇ ನಮ್ಮ ತಂದೆ-ತಾಯಿ, ಹಿರಿಯರು ಹೇಳಿಕೊಡುತ್ತಾರೆ. ಸರ್ಕಾರದ ಕೆಲಸ ಏನಿದ್ದರೂ ಉತ್ತಮ ಶಿಕ್ಷಣ ನೀಡಿ ಮಕ್ಕಳ ಬದುಕನ್ನು ಕಟ್ಟಿಕೊಡುವುದು. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಂತಹ ವಿಚಾರಗಳು, ಪಠ್ಯಗಳು ಶಾಲೆಗಳಲ್ಲಿ ಇರಬೇಕು ಎಂದರು.
ರಾಜ್ಯದಲ್ಲಿ ಕೇವಲ ಮತಬ್ಯಾಂಕ್ಗಾಗಿ ಇಂತಹ ಸೂಕ್ಷ್ಮ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ನಮ್ಮ ಮಕ್ಕಳಿಗೆ ಬೇಕಿರುವುದು ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಶಿಕ್ಷಣ. ರಾಜ್ಯದಲ್ಲಿ ಸಮಸ್ಯೆಗಳು ಸಾಕಷ್ಟು ಇವೆ. ರೈತರ ಕಷ್ಟಗಳು ದೊಡ್ಡ ಪ್ರಮಾಣದಲ್ಲಿ ಇವೆ ಈ ಬಗ್ಗೆ ಸರ್ಕಾರ ಗಮನ ಹರಿಸಲಿ ಎಂದು ಹೇಳಿದರು.