ಹಾಸನ : ಕ್ರೈಸ್ತ ಸಮುದಾಯದ ಚರ್ಚ್ಗಳು, ಪಾದ್ರಿಗಳು, ಹಾಗೂ ಕ್ರೈಸ್ತ ವ್ಯಕ್ತಿಗಳ ಮೇಲೆ ಕೆಲವು ಮತೀಯ ದುಷ್ಕರ್ಮಿಗಳು ನಿರಂತರವಾಗಿ ದಾಳಿ ಮಾಡಿಕೊಂಡು ಬರುತ್ತಿದ್ದು, ಕೂಡಲೇ ಅಂತಹ ದುಷ್ಕರ್ಮಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿ ಎದರು ಪ್ರತಿಭಟನೆ ನಡೆಸಿದರು.
ಭಾರತದಲ್ಲಿ ಅಲ್ಪ ಸಂಖ್ಯಾತ ಕ್ರೈಸ್ತ ಸಮುದಾಯದವರು ಸೌಹಾರ್ಧಯುತವಾಗಿ ಶಾಂತಿ ಮತ್ತು ಸಹಬಾಳ್ವೆಯಿಂದ ಎಲ್ಲಾ ಸಮುದಾಯಗಳ ಜೊತೆಯಾಗಿ ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಕ್ರೈಸ್ತ ಸಮುದಾಯದ ಚರ್ಚ್ಗಳು, ಪಾದ್ರಿಗಳು, ಹಾಗೂ ಕ್ರೈಸ್ತ ವ್ಯಕ್ತಿಗಳ ಮೇಲೆ ಕೆಲವು ಮತೀಯ ದುಷ್ಕರ್ಮಿಗಳು ನಿರಂತರವಾಗಿ ದಾಳಿ ಮತ್ತು ದ್ವೇಷದ ಭಾಷಣಗಳನ್ನು ಮಾಡಿ ಈ ರಾಷ್ಟ್ರದ ಏಕತೆಗೆ ಧಕ್ಕೆ ತರುವುದಲ್ಲದೆ ಧರ್ಮ ಧರ್ಮಗಳ ಮಧ್ಯೆ ದ್ವೇಷ ಬರುವಂತೆ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು.
ತಕ್ಷಣ ಇಂತಹ ಘಟನೆಗಳು ಮರುಕಳಿಸದಂತೆ ಕಾನೂನಿನಡಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಈ ರೀತಿಯ ಘಟನೆಗಳನ್ನು ಮಾಡಿರುವವರ ಮೇಲೆ ಕಾನೂನಿನ ಅಡಿಯಲ್ಲಿ ಬಂಧಿಸಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕು ಮತ್ತು ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಚರ್ಚ್ಗಳ ಮೇಲೆ ದಾಳಿ ಮಾಡಿ ಏಸು ಕ್ರಿಸ್ತನ ಪ್ರತಿಮೆಗಳನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶವ್ಯಕ್ತಪಡಿಸಿದರು. ಅಮಾಯಕ ಅಲ್ಪ ಸಂಖ್ಯಾತ ಕ್ರೈಸ್ತ ಮಿಷಿನರಿ ಪಾದ್ರಿಗಳ ಮೇಲೆ ಆಧಾರ ರಹಿತ ಆರೋಪ ಮತ್ತು ಕೇಸು ದಾಖಲಿಸುತ್ತಿರುದನ್ನು ಕೂಡಲೇ ತಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಹಾಸನ ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದೂಲ್ ಸಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾಲಿದ್ ಮನ್ಸೂರ್, ಜಿಲ್ಲಾ ಉಪಾಧ್ಯಕ್ಷ ಫೈರೋಜ್ ಗಾಂಧಿ, ಜಮೀರ್ ಸಹಮದ್, ಪಕ್ಷದ ಮುಖಂಡರಾದ ಹೆಚ್.ಕೆ. ಮಹೇಶ್, ದೇವರಾಜೇಗೌಡ, ತಾರ ಚಂದನ್, ಶೇಷಪ್ಪ, ಮುಬಾಶೀರ್ ಅಹಮದ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಂಜಿತ್, ಕಹಿಂ, ಮೀರ್ ಜಾನ್, ನಯಾಜ್ ಪಾಷ ಇತರರು ಇದ್ದರು.