ಬೇಲೂರು: ಪಟ್ಟಣದ ಕಳಸಿನಕೆರೆ ಸಮೀಪದಲ್ಲಿರುವ ಮೀರಾಬಾಯಿ ಕಟ್ಟೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ತಹಸೀಲ್ದಾರ್ ಮೋಹನ್ ಕುಮಾರ್ ಪರಿಶೀಲನೆ ಮಾಡಿದ್ದಾರೆ.
ಈ ವೇಳೆ ಕಂದಾಯ ಅಧಿಕಾರಿಗಳು ಹಾಗೂ ಸರ್ಕಾರಿ ಭೂಮಾಪಕರು ಜತೆಗಿದ್ದು ಪರಿಶೀಲನೆ ಮಾಡಿದರು. ಬಳಿಕ ಮಾತನಾಡಿದ ತಹಸೀಲ್ದಾರ್ ಸರ್ಕಾರಿ ಆಸ್ತಿ ಹಾಗೂ ಕೆರೆಗಳನ್ನು ಒತ್ತುವರಿ ಮಾಡಿದ್ದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಮೀರಾಬಾಯಿ ಕಟ್ಟೆ ಮೇಲ್ನೋಟಕ್ಕೆ ಒತ್ತುವರಿ ಆಗಿದ್ದು ಕಂಡುಬಂದಿದ್ದು ಯಾರು ಯಾರು ಒತ್ತುವರಿ ಮಾಡಿ ಕೊಂಡಿದ್ದಾರೋ ಅವರಿಗೆ ನೋಟಿಸ್ ನೀಡಲಾಗಿದ್ದು,ಮತ್ತೊಮ್ಮೆ ಕೆರೆಯನ್ನು ಸಂಪೂರ್ಣ ಅಳತೆ ಮಾಡಿ ಪುರಸಭೆ ವ್ಯಾಪ್ತಿಯಲ್ಲಿ ಬರುವುದರಿಂದ ಕೆರೆಯನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಸಾರ್ವಜನಿಕರ ಉಪಯೋಗಕ್ಕಾಗಿ ಅನುವು ಮಾಡಿಕೊಡಲಾಗುವುದು.
ಅಲ್ಲದೆ ನಿವೇಶನ ನಿರ್ಮಿಸುವ ಸಂದರ್ಭದಲ್ಲಿ ಕಟ್ಟೆಯನ್ನು ಒಡೆದಿದ್ದು ಯಾವ ರೀತಿ ಹಿಂದೆ ಕಟ್ಟೆ ಇತ್ತೋ ಅದೇ ರೀತಿಯಲ್ಲಿ ಸರಿಪಡಿಸುವಂತೆ ನಿವೇಶನದ ಮಾಲೀಕರಿಗೆ ಸೂಚಿಸಲಾಗಿದೆ. ತಾಲೂಕಿನಲ್ಲಿ ಸುಮಾರು 62ಕೆರೆಗಳನ್ನು ಒತ್ತುವರಿ ಮಾಡಿದ್ದನ್ನು ಸಂಪೂರ್ಣವಾಗಿ ತೆರವು ಮಾಡಿ ಒತ್ತುವರಿದಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಸರ್ಕಾರಿ ಆಸ್ತಿ ಕೆರೆ ಕಟ್ಟೆಗಳನ್ನು ಉಳಿಸುವುದು ನಮ್ಮ ಮೊದಲ ಕರ್ತವ್ಯ, ಎಂತಹ ಪ್ರಬಲ ವ್ಯಕ್ತಿಗಳಾಗಿದ್ದರೂ ಕೂಡ ಅವರಿಂದ ಒತ್ತುವರಿ ಜಾಗವನ್ನು ತೆರವುಗೊಳಿಸಲಾಗುವುದು. ಒಂದು ವೇಳೆ ಅಡ್ಡಿಪಡಿಸಿದರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.