ಹಾಸನ: ಪತಿಯನ್ನು ಪ್ರಿಯಕರನ ಸಹಾಯದಿಂದ ಹತ್ಯೆಗೈದು ಬಳಿಕ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ನಂಬಿಸಿದ್ದ ಮಹಿಳೆಯನ್ನು ಪ್ರಿಯಕರನ ಸಹಿತ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ. ಕೊಡಗು ಜಿಲ್ಲೆ ತ್ಯಾಗರಾಜ ಕಾಲೋನಿಯ ನಿವಾಸಿ ಚಂದ್ರಶೇಖರ್ ಮತ್ತು ಸಂತೋಷ್ ಎಂಬಾತನ ಪತ್ನಿ ಶ್ರುತಿ ಬಂಧಿತರು.
ಶ್ರುತಿಗೂ ಸೋಮವಾರಪೇಟೆ ತ್ಯಾಗರಾಜ ಕಾಲೋನಿಯ ನಿವಾಸಿ ಚಂದ್ರಶೇಖರ್ ಗೆ ಅನೈತಿಕ ಸಂಬಂಧವಿತ್ತು. ಇದು ಗಂಡ ಸಂತೋಷ್ ಗೆ ಗೊತ್ತಾದರೆ ತೊಂದರೆಯಾಗುತ್ತದೆ ಎಂಬ ಹಿನ್ನಲೆಯಲ್ಲಿ ಶ್ರುತಿ ಮತ್ತು ಚಂದ್ರಶೇಖರ್ ಸೇರಿ ಸಂತೋಷ್ ನನ್ನು 2021 ಡಿಸೆಂಬರ್ 26ರ ರಾತ್ರಿ ಕೊಲೆ ಮಾಡಿದ್ದರು.
ಬಳಿಕ ಸಕಲೇಶಪುರ ತಾಲೂಕು ಯಸಳೂರು ಪೊಲೀಸ್ ಠಾಣೆಗೆ ತೆರಳಿ ಮರಡಿ ಕೆರೆ ಗ್ರಾಮದ ಬಳಿ ಐಗೂರು ರಸ್ತೆಯಲ್ಲಿ ಗಂಡ ಓಡಿಸುತ್ತಿದ್ದ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು ಗಂಡ ಸಂತೋಷ್ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಹೇಳಿದ್ದರು
ಶವದ ಮಹಜರು ನಡೆಸಿ ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ಮೈಮೇಲೆ ಯಾವುದೇ ರೀತಿಯ ಗಾಯಗಳಿರಲಿಲ್ಲ.ಹೀಗಾಗಿ ಅನುಮಾನ ಬಂದುಪೊಲೀಸರು ಶ್ರುತಿಯನ್ನು ತೀವ್ರ ವಿಚಾರಣೆ ನಡೆಸಿದಾಗ ಪ್ರಿಯಕರ ಚಂದ್ರಶೇಖರ್ ನೊಂದಿಗಿನ ಅನೈತಿಕ ಸಂಬಂಧಕ್ಕೆ ಗಂಡ ಸಂತೋಷ್ ಅಡ್ಡಿಯಾಗಬಹುದೆಂಬ ಉದ್ದೇಶದಿಂದ ಕೊಲೆ ಮಾಡಿರುವುದಾಗಿ ಆಕೆ ತಿಳಿಸಿದ್ದಾಳೆ,ಇದೀಗ ಪೊಲೀಸರು ಶ್ರುತಿ ಮತ್ತು ಪ್ರಿಯಕರ ಚಂದ್ರಶೇಖರ್ ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.