ಮೈಸೂರು: ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ನಕಲಿ ಸರ್ಟಿಫಿಕೇಟ್ ಗಳನ್ನ ಸಿದ್ದಪಡಿಸುತ್ತಿದ್ದ ಸೇವಾಕೇಂದ್ರ ಮೇಲೆ ದಾಳಿ ನಡೆಸಿದ ಮೇಟಗಳ್ಳಿ ಠಾಣೆ ಪೊಲೀಸರು, ಮಾಲೀಕನನ್ನು ಬಂಧಿಸಿದ್ದಾರೆ.
ಮೇಟಗಳ್ಳಿಯ ಸುಧಾಮೂರ್ತಿ ರಸ್ತೆಯಲ್ಲಿನ ನಕುಲ್ ನೆಟ್ ವರ್ಲ್ಡ್ ಹೆಸರಿನ ಸೇವಾ ಕೇಂದ್ರದ ಮಾಲೀಕ ಸುರೇಶ್ ಕುಮಾರ್ನನ್ನು ಬಂಧಿಸಲಾಗಿದೆ. ಯೋಜನೆಯ ನಕಲಿ ಸರ್ಟಿಫಿಕೇಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗೃಹ ಲಕ್ಷ್ಮೀ ಯೋಜನೆಯಡಿ 2 ಸಾವಿರ ರೂ. ಪಡೆಯಲು ಈ ಸೈಬರ್ ಸೆಂಟರ್ಗೆ ತೆರಳಿದ್ದು, ಸೆಂಟರ್ನ ಮಾಲೀಕ ಸುರೇಶ್ ಕುಮಾರ್, ನಕಲಿ ಸರ್ಟಿಫಿಕೇಟ್ಗಳನ್ನು ಸಿದ್ದಪಡಿಸಿ ಯಾಮಾರಿಸಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, ಸೆಂಟರ್ಗೆ ಬೀಗ ಹಾಕಲಾಗಿದೆ.
ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಮಾರ್ಗದರ್ಶನದಲ್ಲಿ ಹಾಗೂ ಡಿಸಿಪಿಗಳಾದ ಮುತ್ತುರಾಜ್ ಮತ್ತು ಜಾಹ್ನವಿ ರವರ ಉಸ್ತುವಾರಿಯಲ್ಲಿ ಎಸಿಪಿ ಗಜೇಂದ್ರ ಪ್ರಸಾದ್ ಮತ್ತು ಮೇಟಗಳ್ಳಿ ಠಾಣೆ ಇನ್ಸ್ಪೆಕ್ಟರ್ ದಿವಾಕರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.