ನಂಜನಗೂಡು: ನಾಯಿಗಳ ದಾಳಿಗೆ ಎರಡು ಜಿಂಕೆಗಳು ಬಲಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಹೆಡತಲೆ ಗ್ರಾಮದಲ್ಲಿ ನಡೆದಿದೆ.
ಬೀದಿನಾಯಿಗಳ ದಾಳಿಗೆ ಜಿಂಕೆಯೊಂದು ಬಲಿಯಾಗಿತ್ತು, ಗಾಯಗೊಂಡಿದ್ದ ಮತ್ತೊಂದು ಜಿಂಕೆಯನ್ನು ರವಾನಿಸುತ್ತಿರುವಾಗ ಮಾರ್ಗ ಮದ್ಯೆ ಇನ್ನೊಂದು ಜಿಂಕೆ ಕೂಡ ಸಾವನ್ನಪ್ಪಿದೆ.
ಗ್ರಾಮದ ಹೊರವಲಯದ ಜಮೀನಿನಲ್ಲಿ ಗುಂಪು ಗೂಡಿ ಮೇವು ತಿನ್ನುತ್ತಿದ್ದ ಸಂದರ್ಭದಲ್ಲಿ ಜಿಂಕೆಗಳ ಗುಂಪಿನ ಮೇಲೆ ನಾಯಿಗಳು ದಾಳಿ ಮಾಡಿ, ಹೆಡತಲೆ ಗ್ರಾಮದೊಳಗೆ ಅಟ್ಟಾಡಿಸಿಕೊಂಡು ಬಂದು, ಒಂದು ಜಿಂಕೆಯನ್ನು ಕೊಂದು ಹಾಕಿವೆ. ಮತ್ತೊಂದು ಜಿಂಕೆಯನ್ನು ಅಟ್ಟಾಡಿಸಿಕೊಂಡು ಬರುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಆ ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ವಿಷಯವನ್ನು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಮಂಜು ಸ್ಥಳಕ್ಕೆ ಬಂದು ಮೃತಪಟ್ಟಿರುವ ಜಿಂಕೆ ಮತ್ತು ಗಾಯಗೊಂಡಿರುವ ಜಿಂಕೆಯನ್ನು ನಂಜನಗೂಡು ಅರಣ್ಯ ಇಲಾಖೆಯ ಪುನಶ್ಚೇತನ ಕೇಂದ್ರಕ್ಕೆ ರವಾನಿಸುತ್ತಿರುವಾಗ ಮತ್ತೊಂದು ಜಿಂಕೆಯು ಕೂಡ ಸಾವಿಗೀಡಾಗಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜಿಂಕೆಗಳ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಅರಣ್ಯ ಇಲಾಖೆ ನಿಯಮದಂತೆ ಉಪ ಅರಣ್ಯಾಧಿಕಾರಿ ಸತೀಶ್, ಸಿಬ್ಬಂದಿ ಮಂಜು ಸೇರಿದಂತೆ ಅಧಿಕಾರಿಗಳು ಜಿಂಕೆಗಳನ್ನು ಸುಡಲಾಯಿತು.