ಮೈಸೂರು: ನಾವು ಬಳಸಿ ಬಿಸಾಡುವ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಪರಿಸರ ಮಾಲಿನ್ಯ ಕಾರಣವಾಗಿದ್ದು, ಎಲ್ಲೆಂದರಲ್ಲಿ ರಾಶಿ ರಾಶಿಯಾಗಿ ಕಾಣಸಿಗುತ್ತವೆ. ಈ ಬಾಟಲಿಗಳು ಸಮುದ್ರ, ನದಿ ಸೇರಿದಂತೆ ಜಲಮೂಲಗಳಿಗೆ ಸೇರಿ ಬಹುದೊಡ್ಡ ತೊಂದರೆ ತಂದೊಡ್ಡುತ್ತವೆ. ಈ ನಿಟ್ಟಿನಲ್ಲಿ ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ( ಡಿಎಫ್ ಆರ್ ಎಲ್) ಮಣ್ಣಿನಲ್ಲಿ ಕರಗುವ ಬಾಟಲಿ ತಯಾರಿಸುವ ತಂತ್ರಜ್ಞಾನ ಅಭಿವೃದ್ಧಿಗೊಳಿಸಿದೆ. ಈ ಬಾಟಲಿಯನ್ನು ರಕ್ಷಣಾ ಹಾಗೂ ಪ್ರವಾಸೋದ್ಯಮ ಖಾಜಿ ರಾಜ್ಯ ಸಚಿವ ಅಜಯ್ ಭಟ್ ಶುಕ್ರವಾರ ಮೈಸೂರಿನಲ್ಲಿ ಬಿಡುಗಡೆ ಮಾಡಿದರು.
ಮೈಸೂರಿನ ಎಸ್ಡಿಎಂ ಕಾಲೇಜಿನಲ್ಲಿ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಾಟಲಿಯ ವಿಶೇಷಗಳನ್ನು ತಿಳಿಸಲಾಯಿತು.
‘ಇಂಜೆಕ್ಷನ್ ಬೋ ಮೌಲಿಂಗ್ ಟೆಕ್ನಿಕ್’ ಬಳಸಿ ‘ಪಾಲಿ ಲಾಸ್ಟಿಕ್ ಆಸಿಡ್ ನಿಂದ 250 ಮಿ.ಲೀ. ಸಾಮರ್ಥ್ಯದ ಬಾಟಲಿಯನ್ನು ಮಂಗಳೂರಿನ ಕೊಂಕಣ್ ಸ್ಪೆಷಾಲಿಟಿ ಪಾಲಿ ಪ್ರಾಡಕ್ಟ್ ಕಂಪನಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅದನ್ನು ಬಳಸಿ ಪರಿಸರಕ್ಕೆ ಮಾರಕವಾದ ಹಾಗೂ ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ಬಾಟಲಿಗಳಿಗೆ ವಿದಾಯ ಹೇಳಬಹುದು’ ಎನ್ನುತ್ತದೆ
ಐಎಸ್ಒ 17088-2021 ಮತ್ತು ಐಎಸ್ 17899 ಟಿ 2022 ಪ್ರಮಾಣೀಕೃತವಾದ ಈ ಉತ್ಪನ್ನವು ಸಂಪೂರ್ಣ ಕರಗುವ ಗುಣಲಕ್ಷಣವನ್ನು ಹೊಂದಿದೆ. ನೀರು. ಇತರ ಪಾನೀಯಗಳನ್ನು ಹಾಕಲು ಸುರಕ್ಷಿತ. ಬಾಟಲಿಯ ಕ್ಯಾಪ್ ಹಾಗೂ ಲೇಬಲ್ ಕೂಡ ಮಣ್ಣಿನಲ್ಲಿ ಕರಗುತ್ತದೆ. ಪ್ಲಾಸ್ಟಿಕ್ ಬಾಟಲಿಯಂತೆಯೇ ಪಾರದರ್ಶಕ, ಬಾಳಿಕೆಯ ಗುಣವನ್ನು ಹೊಂದಿರುವ ಇದನ್ನು ಬಳಸುವ ಮೂಲಕ ಪರಿಸರ ಮಾಲಿನ್ಯ ತಡೆಯಬಹುದು’ ಎಂದು ಹೇಳಿದೆ.
ವಾಣಿಜ್ಯ ಉದ್ದೇಶಕ್ಕಾಗಿ ಬಾಟಲಿಯ ಉತ್ಪಾದನೆ ಇನ್ನೂ ಶುರುವಾಗಿಲ್ಲ. ಇದಕ್ಕೆ ಬೇಕಾಗುವ ಕಚ್ಚಾ ಸಾಮಗ್ರಿಗಳ ಲಭ್ಯತೆ ಮಾರುಕಟ್ಟೆಯಲ್ಲಿ ಕಡಿಮೆ ಇದೆ. ತಂತ್ರಜ್ಞಾನವನ್ನು ಪರಿಚಯಿಸುವುದಕ್ಕಾಗಿ ಕೆಲವು ಬಾಟಲಿಗಳನ್ನಷ್ಟೇ ಸಿದ್ಧಪಡಿಸಲಾಗಿದೆ.
“ಬಾಟಲಿಯಲ್ಲಿರುವ ರಾಸಾಯನಿಕ ಪದಾರ್ಥ ನೀರಿಗೆ ಮಿಶ್ರವಾಗಬಹುದೇ ಎಂಬುದನ್ನು ಪರೀಕ್ಷಿಸಲಾಗಿದೆ, ಬಾಟಲಿಗೆ ನೀರು ತುಂಬಿ ಒಂದು ವರ್ಷದವರೆಗೆ ಇಡಲಾಗಿತ್ತು. ಆದರೆ, ಯಾವುದೇ ವ್ಯತಿರಿಕ್ತ ಫಲಿತಾಂಶ (ಲೀಚಿಂಗ್ ಎಫೆಕ್ ಆಗಿಲ್ಲ) ಬಂದಿಲ್ಲ. ತಂತ್ರಜ್ಞಾನದ ವರ್ಗಾವಣೆಯಾದ ನಂತರ ಆಯಾ ಕಂಪನಿಗಳು ದರ ನಿಗದಿಪಡಿಸಲಿವೆ’ ಎನ್ನುತ್ತಾರೆ ಡಿಎಫ್ಆರ್ಎಲ್ ಅಧಿಕಾರಿಗಳು. ಇದೊಂದು ಕ್ರಾಂತಿಕಾರಿ ಪ್ರಯೋಗವಾಗಿದ್ದು, ಇದು ಯಶಸ್ವಿಯಾದಲ್ಲಿ ಪ್ಲಾಸ್ಟಿಕ್ ಗೇ ಬದಲಿಯಾಗಿ ಇದನ್ನೇ ಬಳಸಬಹುದಾಗಿದೆ. ಅಲ್ಲದೆ ಪರಿಸರನಾಶವನ್ನು ತಡೆಗಟ್ಟಬಹುದು.