ಚಾಮರಾಜನಗರ: ಕರ್ನಾಟಕ ಅರಣ್ಯ ಇಲಾಖೆ, ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ ಮತ್ತು ಸ್ವಾಮಿ ವಿವೇಕಾನಂದ ಟ್ರಸ್ಟ್, ಬಿಳಿಗಿರಿರಂಗನಬೆಟ್ಟ ಇವರ ಸಹಯೋಗದಲ್ಲಿ ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಯಲ್ಲಿ ವಿಶ್ವ ಆನೆ ದಿನಾಚರಣೆ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳ ಶಾಲಾ ಮಕ್ಕಳು ಮತ್ತು ಗಿರಿಜನ ಆಶ್ರಮ ಶಾಲೆಯ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕಿ ದೀಪ್ ಜೆ, ಕಂಟ್ರ್ಯಾಕ್ಟರ್ ರವರು ಪರಿಸರ ಮತ್ತು ಆನೆ ನಡುವಿನ ಸಂಬಂಧದ ಬಗ್ಗೆ ಮತ್ತು ಮಾನವ ಹಾಗೂ ಆನೆ ಸಂಘರ್ಷದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟು ನಂತರ ವಿದ್ಯಾರ್ಥಿಗಳ ಜೊತೆ ಸಂವಾದವನ್ನು ನಡೆಸಿದರು.
ಇದಕ್ಕೂ ಮೊದಲು ಚಾಮರಾಜನಗರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್. ಕೆ. ರವರು ಮಕ್ಕಳನ್ನು ಉದ್ದೇಶಿಸಿ ವಿಶ್ವ ಆನೆ ದಿನಾಚರಣೆಯ ಹಿನ್ನಲೆ ಹಾಗೂ ಆನೆಯ ಸ್ವಭಾವದ ಬಗ್ಗೆ ಮಾತನಾಡಿದರು. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶ್, ಜಿ ರವರು ಮಾತನಾಡಿ ರಾಜ್ಯದಲ್ಲಿ ನಮ್ಮ ಜಿಲ್ಲೆಯಲ್ಲಿ ಅತೀ ಹೆಚ್ಚು ಆನೆ ಇರುವುದರ ಬಗ್ಗೆ ಮಾಹಿತಿ ನೀಡಿ ಚಾಮರಾಜನಗರ ಜಿಲ್ಲೆಯ ಜನರು ಹೆಮ್ಮೆ ಪಡುವ ವಿಷಯವಾಗಿದ್ದು, ಆನೆಗಳ ಸಂರಕ್ಷಣೆಗೆ ಜಿಲ್ಲೆಯ ಜನರು ಸಹಕಾರ ನೀಡಬೇಕೆಂದು ಕರೆ ನೀಡಿದರು.
ಆನೆ ದಿನಚರಣೆ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲಾ ವಿದ್ಯಾರ್ಥಿಗಳಿಗೆ ಜಂಗಲ್ ಸಫಾರಿ, ಆನೆ ಕ್ಯಾಂಪ್ ವೀಕ್ಷಣೆ, ಜಂಗಲ್ ವಾಕ್ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದ್ದು, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವೆಂಕಟ್ನಾಯ್ಡು, ನವೀನ್ ಜಗಲಿ ಮತ್ತು ಕೆ.ಗುಡಿ ವನ್ಯಜೀವಿ ವಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.