ಕಾರವಾರ: ನಗರದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ ಏಳು ದಿನದ ಮಗುವಿಗೆ ಕಾರವಾರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶೇರ್ ಬ್ಲಡ್ ಸೇವ್ ಲೈಫ್ ತಂಡದ ಸದಸ್ಯರು ರಕ್ತದ ಅವಶ್ಯಕತೆ ಇದ್ದ ಹಸುಗೂಸಿಗೆ ರಕ್ತ ನೀಡುವ ಮೂಲಕ ಮಗುವಿನ ಪ್ರಾಣ ರಕ್ಷಣೆ ಮಾಡಿದ್ದಾರೆ.
ಸಿವಿಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಸುಗೂಸಿಗೆ ರಕ್ತದಲ್ಲಿ ಪ್ಲೇಟ್ಲೆಟ್ ಕೌಂಟ್ ಕಡಿಮೆ ಇತ್ತು. ಹಾಗಾಗಿ ಮಗುವಿಗೆ ರಕ್ತ ನೀಡುವ ತುರ್ತು ಅಗತ್ಯವಿದೆ ಎಂದು ವೈದ್ಯರು ತಿಳಿಸಿದರು. ವೈದ್ಯರು ತಿಳಿಸಿದ ನಂತರ ಪಾಲಕರು ಕೆಲಕಾಲ ಆತಂಕಕ್ಕೆ ಒಳಗಾದರು. ಒಂದೆರಡಾದರೆ ಹೊಂದಿಸಬಹುದು. ಆದರೆ, ಐದು ಯೂನಿಟ್ ಬ್ಲಡ್ ಹೊಂದಿಸುವುದು ಹೇಗೆ ಎನ್ನುವ ಪ್ರಶ್ನೆ ಎದುರಾಗಿತ್ತು. ರಕ್ತದ ಅವಶ್ಯಕತೆ ಇದೆ ಎಂದು ಗೊತ್ತಾದ ನಂತರ ಕೆಲವರು ಶುಭಂ ಕಳಸ ನೇತೃತ್ವದ ಶೇರ್ ಬ್ಲಡ್ ಸೇವ್ ಲೈಪ್ಗೆ ಸಂಪರ್ಕಿಸುವಂತೆ ತಿಳಿಸಿದರು. ತಡಮಾಡದೆ ಮಗುವಿನ ಪಾಲಕರು ಶುಭಂ ಕಳಸ ಅವರಿಗೆ ಸಂಪರ್ಕ ಮಾಡಿದರು.
ರಕ್ತದ ಅವಶ್ಯಕತೆ ಇದ್ದವರಿಗಾಗಿಯೇ ಶೇರ್ ಬ್ಲಡ್ ಸೇವ್ ಲೈಫ್ ಸಂಘಟನೆ ಆರಂಭಿಸಿರುವ ಶುಭಂ ಅವರು ತಮ್ಮ ಗುಂಪಿನ ಸದಸ್ಯರನ್ನು ಸಂಪರ್ಕಿಸಿ ಆಸ್ಪತ್ರೆಗೆ ಕಳುಹಿಸಿದರು. ಹಸುಗೂಸಿಗೆ ರಕ್ತದ ಅವಶ್ಯಕತೆ ಇದೆ ಎಂದ ತಕ್ಷಣ ಶೇರ್ ಬ್ಲಡ್ ಸೇವ್ ಲೈಫ್ನ ಸದಸ್ಯರಾದ ರಾಹುಲ್ ದೇವಿದಾಸ ನಾಯ್ಕ್ ಮತ್ತು ಬಸವರಾಜ ಹಾಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಅನಿಲ್ ಕುಮಾರ್,ಸುನಿಲ್, ಋಷಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು.