ಗುಂಡ್ಲುಪೇಟೆ: ಬಿಸಿಯೂಟದ ಬೇಳೆಕಾಳು ಹಾಗೂ ಅಕ್ಕಿ ಚೀಲದಲ್ಲಿ ಹುಳಗಳಿದ್ದರೂ ಅದೇ ಕಾಳುಗಳಿಂದ ಸಾಂಬಾರ್ ಮಾಡಿಸಿ ಮಕ್ಕಳಿಗೆ ಬಡಿಸಿರುವ ಘಟನೆ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿನಡೆದಿದೆ.
ಕಳೆದೊಂದು ವಾರದಿಂದ ಹುಳಭರಿತ ಬಿಸಿಯೂಟ ಸೇವಿಸುತ್ತಿರುವ ಶಾಲೆಯ ಮಕ್ಕಳ ಸ್ಥಿತಿ ಕಂಡ ಸ್ಥಳೀಯರು, ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ತಾಲೂಕು ಘಟಕದ ಗಮನಕ್ಕೆ ತರುವ ಮೂಲಕ ಮುಖ್ಯ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ ಒಟ್ಟು 214 ವಿದ್ಯಾರ್ಥಿನಿಯರಿದ್ದು , ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಬಳಸುತ್ತಿರುವ ಬೇಳೆ ಕಾಳುಗಳಲ್ಲಿ ಹುಳ ಗಳಿರುವ ಈ ವಿಚಾರವನ್ನು ಅಡುಗೆ ಸಹಾಯಕರು ಶಾಲೆಯ ಮುಖ್ಯ ಶಿಕ್ಷಕರ ಗಮನಕ್ಕೆ ತಂದರೂ ಗಮನ ಹರಿಸಿರಲಿಲ್ಲ.
ಸಾಂಬಾರಿನಲ್ಲಿ ಹುಳ ಕಂಡ ಮಕ್ಕಳು, ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾರೆ. ಇಂತಹ ಘಟನೆ ಶಾಲೆಯಲ್ಲಿ ಒಂದು ವಾರದಿಂದ ನಡೆಯು ತ್ತಿದ್ದ ಹಿನ್ನೆಲೆ ತಾಲೂಕು ಕರವೇ ತಾಲೂಕು ಅಧ್ಯಕ್ಷ ಸುರೇಶ್ ನಾಯಕ್ ನೇತೃತ್ವದಲ್ಲಿ ಊಟ ಸಮಯದಲ್ಲಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಬೇಳೆ ಹಾಗೂ ಅಕ್ಕಿ ಚೀಲದಲ್ಲಿ ಹುಳಗಳು ಕಂಡುಬಂದಿವೆ.
ಈ ಬಗ್ಗೆ ಮುಖ್ಯ ಶಿಕ್ಷಕರನ್ನು ಕರವೇ ಸದಸ್ಯರು ಪ್ರಶ್ನಿಸಿದ ಸಂದರ್ಭ ದಲ್ಲಿ ಮುಖ್ಯ ಶಿಕ್ಷಕರು ಉತ್ತರ ನೀಡುವಲ್ಲಿ ವಿಫಲರಾಗಿದ್ದು, ಕೂಡಲೇ ಈ ಘಟನೆ ಸಂಬಂಧ ಶಿಕ್ಷಣ ಇಲಾಖೆ ಅಧಿಕಾರಿಗಳು ಗುಣಮಟ್ಟದ ಆಹಾರ ಪದಾರ್ಥ ಸರಬರಾಜು ಮಾಡಲು ಒತ್ತಾಯಿಸಿದ್ದಾರೆ.
ಶಾಲೆಯಲ್ಲಿ ಅವಧಿಗೂ ಮೀರಿದ ಬೇಳೆ ಪದಾರ್ಥ ಇರುವ ಮಾಹಿತಿ ಶಾಲೆಯ ಮುಖ್ಯ ಶಿಕ್ಷಕರಿಂದ ಮಾಹಿತಿ ಇಲ್ಲದಿರುವುದು ಹಾಗೂ ಗುಣಮಟ್ಟ ಇಲ್ಲದ ಪದಾರ್ಥಗಳಲ್ಲಿ ಮಕ್ಕಳಿಗೆ ಊಟ ತಯಾರಿಸಿ ನೀಡುತ್ತಿರುವುದು ತಪ್ಪಾಗಿದ್ದು, ಈ ಕೂಡಲೇ ಶಾಲೆಗೆ ಭೇಟಿ ನೀಡುವ ಮೂಲಕ ಆಗಿರುವ ಸಮಸ್ಯೆ ಬಗೆ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಲಾಗುವುದು ಎಂದು ತಾಲೂಕು ಯೋಜನಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.