ಸರಗೂರು: ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಜಮೀನಿನಲ್ಲಿ ಬೆಳೆಯಲಾದ ಹೊಗೆಸೊಪ್ಪು ಬೆಳೆಗಳನ್ನು ಕಾಡು ಹಂದಿಗಳು ಮುರಿದು ತಿಂದು ನಾಶಗೊಳಿಸುತ್ತಿದ್ದು, ಹೊಗೆಸೊಪ್ಪು ಬೆಳೆದ ರೈತರು ಕಂಗಲಾಗಿದ್ದಾರೆ.
ಬಿ.ಮಟಕೆರೆ, ಬಾಡಗ, ಗದ್ದೆಹುಂಡಿ, ಹೀರೆಹಳ್ಳಿ ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳಲ್ಲಿನ ರೈತರು ಸುಮಾರು 200 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾದ ಹೊಗೆಸೊಪ್ಪಿನ ಗಿಡಗಳನ್ನು ಕಾಡು ಹಂದಿಗಳು 10 ದಿನಗಳಿಂದ ಸತತವಾಗಿ ಗಿಡವನ್ನು ಅರ್ಧಕ್ಕೆ ಕಡಿದು ತಿಂದು ನಾಶಗೊಳಿಸುತ್ತಿವೆ. ಇದರಿಂದಾಗಿ ಗಿಡಗಳ ಬೆಳವಣಿಗೆಗೆ ಕುಂಠಿತವಾಗುತ್ತಿದೆ. ಸಂಪೂರ್ಣವಾಗಿ ಬೆಳೆದರೆ 25 ಎಲೆಗಳು ಬರಲಿದ್ದು, ಹಂದಿ ತಿನ್ನುವುದರಿಂದ ಕೇವಲ 4 ಎಲೆಗಳು ಬೆಳೆಯಲಿವೆ. ಹೀಗಾಗಿ ರೈತರಿಗೆ ತುಂಬಾ ನಷ್ಟ ಉಂಟಾಗಿದೆ ಎಂದು ರೈತರು ದೂರಿದ್ದಾರೆ.
ರೈತರು ಸಾಲ ಮಾಡಿ ಹೊಗೆಸೊಪ್ಪು ನಾಟಿ ಮಾಡಲು ಎಕರೆಯೊಂದಕ್ಕೆ 40 ಸಾವಿರ ರೂ.ಖರ್ಚು ಮಾಡಿದ್ದು, ಬಿ.ಮಟಕೆರೆ ಗ್ರಾಮದ ರೈತ ಉದಯ್ಕುಮಾರ್ 22 ಸಾವಿರ ಗಿಡ ನಾಟಿ ಮಾಡಿದ್ದಾರೆ. ಪ್ರಕಾಶ್ ಮಾಸ್ತಯ್ಯ ಎಂಬ ರೈತ 12 ಸಾವಿರ, ಗದ್ದೆಹುಂಡಿ ಅನಂತರಾಜು 20 ಸಾವಿರ, ಸತೀಶ್ 20ಸಾವಿರ ಗಿಡ ನಾಟಿ ಮಾಡಿದ್ದಾರೆ. ಹೀಗಾಗಲೇ ಹಂದಿಗಳು ಹೊಗೆಸೊಪ್ಪಿನ ಗಿಡಗಳನ್ನು ಸಂಪೂರ್ಣವಾಗಿ ಕಡಿದು ನಾಶಗೊಳಿಸಿರುವುದರಿಂದ ಎಕರೆಯೊಂದಕ್ಕೆ 4 ಲಕ್ಷ ರೂ.ನಷ್ಟವಾಗಲಿದೆ ಎಂದು ರೈತರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಕಾಡು ಹಂದಿಗಳ ಹಾವಳಿಯನ್ನು ತಡೆಗಟ್ಟಲು ರಾತ್ರಿ ವೇಳೆ ಜಮೀನಿನಲ್ಲಿ ಕಾವಲು ಕಾಯುತ್ತೇವೆ. ಆದರೂ ಕಾಡುಹಂದಿ ಕಣ್ಣು ತಪ್ಪಿ ಬೆಳೆಗಳನ್ನು ನಾಶಗೊಳಿಸುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಕುರಿತು ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.