ಯಳಂದೂರು: ಪಟ್ಟಣದ ಬಳೇಪೇಟೆಯ ಸುವರ್ಣಾವತಿ ನದಿ ದಡದಲ್ಲಿರುವ ಹಜರತ್ ಮುರ್ತುಜಾ ಷಾ ಖಾದ್ರಿ ದರ್ಗಾದಲ್ಲಿ ಸಂಭ್ರಮ ಸಡಗರಗಳಿಂದ ಉರುಸ್(ಗಂಧೋತ್ಸವ) ನಡೆಯಿತು.
ಇದಕ್ಕಾಗಿ ದರ್ಗಾವನ್ನು ವಿಶೇಷ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸಂಜೆ 7 ಗಂಟೆಗೆ ಪಟ್ಟಣದ ಜಾಮೀಯಾ ಮಸೀದಿಯಿಂದ ದೇವರ ನಾಮ ಹಾಡುವ ಫಕೀರರ ತಂಡ, ದೇವರ ನಾಮಗಳನ್ನು ಹಾಡಿಕೊಂಡು ಪಟ್ಟಣದ ಹಳೇ ಅಂಚೆಕಚೇರಿ ರಸ್ತೆ, ಸುವರ್ಣಾವತಿ ಸೇತುವೆ, ಬಳೇಪೇಟೆಯಲ್ಲಿ ಮೆರವಣಿಗೆ ಮೂಲಕ ಗಂಧದ ಬಿಂದಿಗೆಯನ್ನು ದರ್ಗಾಕ್ಕೆ ತರಲಾಯಿತು.
ರಾತ್ರಿ 8.30ಕ್ಕೆ ವಿಶೇಷ ದುವಾ (ಪ್ರಾರ್ಥನೆ) ಸಲ್ಲಿಸುವ ಮೂಲಕ ಗಂಧವನ್ನು ದರ್ಗಾಕ್ಕೆ ಸಮರ್ಪಿಸಲಾಯಿತು. ರಾತ್ರಿ ಅಬ್ರಾರ್ ಅಹ್ಮದ್, ವಸೀಂ ಬರ್ಕಾತಿ, ಅಬ್ದುಲ್ ಹಲೀಂ ಹಾಗೂ ಇವರ ನೇತೃತ್ವದ ತಂಡ ಪ್ರವಚನ ಹಾಗೂ ನಾತ್ (ದೇವರ ನಾಮ)ಗಳನ್ನು ಹಾಡುವ ಮೂಲಕ ರಂಜಿಸಿದರು. ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದರ್ಗಾದ ದರ್ಶನ ಪಡೆದುವ ವಿಶೇಷ ದುವಾ ಸಲ್ಲಿಸಿದರು.
ಈ ದರ್ಗಾದಲ್ಲಿ ಪ್ರತಿ ವರ್ಷ ರಂಜಾನ್ ತಿಂಗಳು ಆರಂಭಕ್ಕೂ ಮುಂಚೆ ಗಂಧೋತ್ಸವ ನಡೆಯುವ ವಾಡಿಕೆ ಇದೆ. ಇಲ್ಲಿಗೆ ಮುಸ್ಲಿಮರು ಮಾತ್ರವಲ್ಲದೆ ಹಿಂದೂ ಭಕ್ತರೂ ಸಹ ಪಾಲ್ಗೊಳ್ಳುವುದು ವಿಶೇಷವಾಗಿದೆ. ಹರಕೆ ಹೊತ್ತು ಬರುವ ಅನೇಕ ಹಿಂದೂ ಭಕ್ತರು ಪ್ರಾರ್ಥಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಾಣ ಸಿಕ್ಕಿತು. ನೆರೆದಿದ್ದ ಭಕ್ತರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಮುಸ್ಲಿಂ ಮುಖಂಡರಾದ ನಯಾಜ್ ಖಾನ್ ಪಪಂ ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ ಮುಖಂಡರಾದ ನಿಂಗರಾಜು, ರಾಜಶೇಖರ್, ಗುಲಾಮಾನೆ ಔಲಿಯಾ ಅಲ್ಲಾ ಕಮಿಟಿ ಸದಸ್ಯರು ಸೇರಿದಂತೆ ಸಾವಿರಾರು ಸಂಖ್ಯೆಯ ಭಕ್ತರು ಭಾಗಹಿಸಿದ್ದರು.