ಚಾಮರಾಜನಗರ: ಕಲ್ಲು ಗಣಿಯಲ್ಲಿ ಸ್ಪೋಟಿಸಲು ಕುಳಿ ತೆಗೆಯುತ್ತಿದ್ದ ವೇಳೆ ಕಾರ್ಮಿಕರ ಮೇಲೆ ಗುಡ್ಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಚಾಮರಾಜನಗರ ತಾಲ್ಲೂಕಿನ ಬಿಸಲ್ವಾಡಿಯ ಬಿಳಿ ಕಲ್ಲು ಕ್ವಾರಿಯಲ್ಲಿ ನಡೆದಿದೆ.
ತಮಿಳುನಾಡು ಮೂಲದ ಭಾಸ್ಕರ್ ರವರ ಪತ್ನಿ ರೇಣುಕಾದೇವಿ ಎಂಬುವವರಿಗೆ ಚಾಮರಾಜನಗರ ತಾಲ್ಲೂಕಿನ ಬಿಸಲವಾಡಿ ಗ್ರಾಮದ ಸರ್ವೆ ನಂಬರ್ 172 ರಲ್ಲಿ ಬಿಳಿಕಲ್ಲು ಗಣಿಗಾರಿಕೆಯಿದ್ದು, ಈ ಗಣಿಯಲ್ಲಿ ಕಾಗಲವಾಡಿ ಮೋಳೆ ಗ್ರಾಮದ ಕುಮಾರ್ (28), ಶಿವರಾಜು (35) ಹಾಗೂ ಸಿದ್ದರಾಜು (27) ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಈ ವೇಳೆ ಕಾರ್ಮಿಕರೊಬ್ಬರು ಕ್ವಾರಿಯ ಗೋಡೆಯ ಮಧ್ಯದಲ್ಲಿ ಬಂಡೆ ಸ್ಪೋಟಿಸಲು ಕುಳಿ ಹೊಡೆಯುತ್ತಿದ್ದರು. ಇನ್ನಿಬ್ಬರು ಕೆಳಗಡೆ ನಿಂತು ಅವರಿಗೆ ನೆರವಾಗುತ್ತಿದ್ದರು. ಈ ಸಂದರ್ಭದಲ್ಲಿ ಗುಡ್ಡ ಕುಸಿದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬರು ಗಂಭೀರ ಗಾಯಗೊಂಡರು. ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಯಿಸಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು.
ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ತಹಸೀಲ್ದಾರ್ ಬಸವರಾಜು ಭೇಟಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಳೆದ ಮಾರ್ಚ್ 4ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಮಡಹಳ್ಳಿಯ ಗುಮ್ಮಕಲ್ಲುಗುಡ್ಡದ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಬಿಹಾರ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಇದೀಗ ಅದೇ ರೀತಿಯ ದುರಂತ ಸಂಭವಿಸಿದ್ದು, ಇಂತಹ ದುರಂತ ಇನ್ನಷ್ಟು ಜೀವಗಳನ್ನು ಬಲಿ ಪಡೆಯುವ ಮುನ್ನ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕಿದೆ.