ಚಾಮರಾಜನಗರ: ತಮಿಳುನಾಡಿನಿಂದ ಮೈಸೂರಿಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿ ಹೊಡೆದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಪೊಲೀಸ್ ಕ್ವಾಟ್ರಸ್ ಬಳಿಯ ಹುಲುಸುಗುಡ್ಡೆ ಬಳಿ ಶುಕ್ರವಾರ ಬೆಳಗ್ಗೆ 9 ಸಮಯದಲ್ಲಿ ಸಂಭವಿಸಿದೆ, ಚಾಲಕ ಲಾರಿಯಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದು, ಕ್ಲೀನರ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ನಾಲ್ ರೋಡ್ ಮೂಲಕವಾಗಿ ಮೈಸೂರಿಗೆ ತಮಿಳುನಾಡಿನಿಂದ ಸಿಮೆಂಟ್ ತುಂಬಿದ್ದ ಸರಕು ಸಾಗಾಣಿಕೆ ಭಾರಿ ಲಾರಿ ತೆರಳುತ್ತಿದ್ದ ವೇಳೆ ಲಾರಿ ಪಲ್ಟಿಯಾಗಿದೆ. ಲಾರಿಯ ಚಾಲಕ ಬಂಡಳ್ಳಿ ಗ್ರಾಮದ ಬಾಬು( 50) ಲಾರಿಯಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದು, ಸ್ಥಳೀಯರು ಮತ್ತು ಪೊಲೀಸರು ಜೆಸಿಬಿ ಮೂಲಕ ಲಾರಿ ತೆರವಿಗೆ ಪ್ರಯತ್ನಿಸುತ್ತಿದ್ದು, ಮೃತ ಬಾಬು ವಿನ ಶವ ಹೊರತೆಗೆಯಲು ಮುಂದಾಗಿದ್ದಾರೆ.
ಲಾರಿ ಕ್ಲೀನರ್ ಅಧಾಲ್ ಪಾಷ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳದಲ್ಲಿ ಹೆಚ್ಚಿನ ಜನರು ಜಮಾಯಿಸಿದ್ದು, ಮಲೆ ಮಹದೇಶ್ವರ ಬೆಟ್ಟ ಮಾರ್ಗದಲ್ಲಿ ವಾಹನಗಳು ಸಂಚರಿಸಲಾಗದೆ ತಾತ್ಕಾಲಿಕವಾಗಿ ಜಾಮ್ ಆಗಿದೆ. ಹನೂರು ಪೊಲೀಸರು ಸ್ಥಳದಲ್ಲಿದ್ದು, ಮೃತ ದೇಹವನ್ನು ಹೊರತೆಗೆಯಲು ಮುಂದಾಗಿದ್ದಾರೆ.