ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ, ವನ್ಯಜೀವಿ ವಲಯದ ಪೊನ್ನಾಚಿ ವ್ಯಾಪ್ತಿಯಲ್ಲಿ ಕಳೆದ 3-4 ತಿಂಗಳಿಂದ ಉಪಟಳ ನೀಡುತ್ತಿದ್ದ ಸಲಗವನ್ನು ಕೊನೆಗೂ ಶುಕ್ರವಾರ ರಾತ್ರಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಗೇರಟ್ಟಿ ಗ್ರಾಮ ಸಮೀಪದ ಕತ್ರಿಕಪ್ಪ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ ಸಾಕಾನೆಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಆನೆಯನ್ನು ಸೆರೆ ಹಿಡಿಯವಲ್ಲಿ ಯಶಸ್ವಿಯಾಗಿದೆ.
ಒಂದೇ ದಿನದಲ್ಲಿ ಆನೆಯನ್ನು ಸೆರೆ ಹಿಡಿಯಲಾಗಿದ್ದು, ಪುಂಡಾನೆಯಿಂದ ನಿದ್ದೆ ಇಲ್ಲದಂತಾಗಿದ್ದ ಈ ಭಾಗದ ಜನರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
5 ಸಾಕಾನೆ 100ಕ್ಕೂ ಹೆಚ್ಚು ಸಿಬ್ಬಂದಿ ಮತ್ತಿಗೋಡು, ತಿತಿಮತಿ, ಕುಶಾಲನಗರದ ದುಬಾರೆ ಹಾಗೂ ಬಳ್ಳೆ ಶಿಬಿರದ ಅರ್ಜುನ, ಅಶ್ವತ್ಥಾಮ, ಕರ್ಣ, ಭೀಮ ಸೇರಿದಂತೆ ಒಟ್ಟು 6 ಸಾಕಾನೆ ನೆರವಿನೊಂದಿಗೆ ಗೆರಟ್ಟೆ ಭಾಗದ ಅರಣ್ಯ ಪ್ರದೇಶದಲ್ಲಿ ಕೈಗೊಂಡ ಕಾರ್ಯಾಚರಣೆ ಯಶಸ್ವಿಯಾಗಿದೆ. ಆನೆ ಕಾರ್ಯಪಡೆ ತಂಡ ಅರಣ್ಯ ಅಧಿಕಾರಿಗಳು ಸೇರಿದಂತೆ 100 ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಪಶು ವೈದ್ಯಾಧಿಕಾರಿ ಡಾ.ರಮೇಶ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.
ಪೊನ್ನಾಚಿ ಭಾಗದಲ್ಲಿ ಹಾವಳಿ ನಡೆಸುತ್ತಿರುವ ಪುಂಡಾನೆಯನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸುವಂತೆ ಗ್ರಾಮಸ್ಥರು ಬಹಳ ದಿನಗಳಿಂದಲೂ ಒತ್ತಾಯಿಸುತ್ತಿದ್ದರು ಈ ಸಂಬಂಧ ಜ.8 ರಂದೇ ಚಾಮರಾಜನಗರ ಅರಣ್ಯ ಸಂರಕ್ಷಣಾಧಿಕಾರಿ ಆನೆಯನ್ನ ಶಿಬಿರಕ್ಕೆ ಸ್ಥಳಾಂತರಿಸಲು ಅನುಮತಿ ಕೋರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ಅವರಿಗೆ ಪತ್ರ ಬರೆದಿದ್ದರು. ಅದರಂತೆ ಜೂ.23ರ ರಂದು ಆದೇಶ ಹೊರಡಿಸಿ ಆನೆಯನ್ನು ಸೆರೆ ಹಿಡಿದು ಆನೆ ಶಿಬಿರಕ್ಕೆ ಸ್ಥಳಾಂತರಿಸುವಂತೆ ಅನುಮತಿ ನೀಡಲಾಯಿತು ಆದರೆ, ಪಶುವೈದ್ಯರ ಅಲಭ್ಯತೆಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯನ್ನೇ ಪ್ರಾರಂಭಿಸದೆ ಇದ್ದುದರಿಂದ ಈ ಭಾಗದ ಗ್ರಾಮಗಳ ಜನರಲ್ಲಿ ಅಸಮಧಾನ ವ್ಯಕ್ತವಾಗಿತ್ತು.