ಹುಬ್ಬಳ್ಳಿ: ಯುವಕನೊಬ್ಬ ಅತಿ ಜೋರಾಗಿ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ತಂತಿಗಳು ಕಾರಿನ ಮೇಲೆ ಬಿದ್ದರು ಕೂಡಾ ಕಾರಿನಲ್ಲಿದ್ದ 4 ಜನ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ತಡರಾತ್ರಿ ವಿದ್ಯಾನಗರದಲ್ಲಿ ನಡೆದಿದೆ.
ವಿದ್ಯಾನಗರದ ಸೆವೆನ್ ಬೀನ್ಸ್ ಹೋಟೆಲ್ ಬಳಿಯಲ್ಲಿ ರಾತ್ರಿ ಸುಮಾರಿಗೆ 4 ಜನ ಯುವಕರು ಕಿಯಾ ಕಾರನ್ನು ವಿದ್ಯಾನಗರದಲ್ಲಿ ಅತಿ ಜೋರಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಆದರೆ ಏಕಾಏಕಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಕಂಬ ತುಂಡಾಗಿ ಕಾರಿನ ಮೇಲೆ ಬಿದ್ದಿದೆ. ಆದರೆ ಕಾರಿನಲ್ಲಿದ್ದವರ ಪುಣ್ಯವೋ ಅಥವಾ ಆ ಸಂದರ್ಭದಲ್ಲಿ ಆ ರಸ್ತೆಯಲ್ಲಿ ಬೇರೆ ವಾಹನಗಳು ಹಾಗೂ ಪಾದಚಾರಿಗಳು ಇಲ್ಲದ ಕಾರಣ ನಡೆಯಬಹುದಾದ ದೊಡ್ಡ ದುರಂತ ತಪ್ಪಿದೆ.
ಅಪಘಾತ ಆಗುತ್ತಿದ್ದ ಹಾಗೆ ಕಾರಿನಲ್ಲಿದ್ದ ನಾಲ್ಕು ಜನ ಕಾರನ್ನು ಬಿಟ್ಟು ಪರಾರಿಯಾಗಿದ್ದು, ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಮರದಲ್ಲಿ ಸಿಲುಕಿಕೊಂಡ ಕಾರನ್ನು ತೆರವು ಗೊಳಿಸಿ ಉತ್ತರ ಸಂಚಾರಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಈ ಪ್ರಕರಣ ದಾಖಲು ಮಾಡಿಕೊಂಡು ಅಪಘಾತ ಮಾಡಿ ಕಾರು ಬಿಟ್ಟು ಹೋಗಿರುವ ಯುವಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.