ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆಮಹದೇಶ್ವರಬೆಟ್ಟಕ್ಕೆ ಸುತ್ತೂರು ಶ್ರೀಕ್ಷೇತ್ರದ ದೇಸಿಕೇಂದ್ರಮಹಾಸ್ವಾಮೀಜಿ ಹಾಗೂ ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವ ಎಸ್.ಎಂ.ಕೃಷ್ಣ ಭೇಟಿ ನೀಡಿ ಮಹದೇಶ್ವರಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಹದೇಶ್ವರಸ್ವಾಮಿಯ ದರ್ಶನ ಬಳಿಕ ದೇವಾಲಯವನ್ನು ಪ್ರದಕ್ಷಿಣೆ ಹಾಕಿದರಲ್ಲದೆ ಸಾಲೂರು ಬೃಹನ್ಮಠಕ್ಕೆ ತೆರಳಿ ಮಠದ ಪಟ್ಟದ ಗುರುಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದರು. ಇದಕ್ಕೂಮುನ್ನ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಗಣ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಎಸ್.ಎಂ ಕೃಷ್ಣ ಅವರು ಕಾರಿನ ಮೂಲಕ ಮಹದೇಶ್ವರಬೆಟ್ಟಕ್ಕೆ ಆಗಮಿಸಿ ಬಳಿಕ ವಾಪಸ್ ತೆರಳಿದ್ದಾರೆ.
ಈ ಸಂದರ್ಭದಲ್ಲಿ ಮಲೆಮಹದೇಶ್ವರಬೆಟ್ಟ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀಶಾಂತಮಲ್ಲಿಕಾರ್ಜುನಸ್ವಾಮೀಜಿ, ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜು, ಲೆಕ್ಕಾಧೀಕ್ಷ ಪ್ರವೀಣ್ ಪಾಟೇಲ್, ಕರವೀರಸ್ವಾಮಿಗಳು, ಪಾರುಪತ್ತೇದಾರರಾದ ಪುಟ್ಟಪ್ಪ, ಮಲ್ಲಿಕಾರ್ಜುನ ಮತ್ತಿತರರು ಇದ್ದರು.