ಸರಗೂರು: ಕಾಡಾನೆಗಳು ಮತ್ತು ಹಂದಿಗಳು ದಾಳಿ ನಡೆಸಿ ಮೆಕ್ಕೆಜೋಳ ಬೆಳೆ ನಾಶ ಮಾಡಿರುವ ಘಟನೆ ತಾಲ್ಲೂಕಿನ ಕೊತ್ತೆಗಾಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ರೈತರು ವಿವಿಧ ಬೆಳೆಗಳನ್ನು ಬೆಳೆದಿದ್ದು, ಈಗ ಮಳೆ ಆರಂಭವಾಗಿರುವುದರಿಂದ ಪಕ್ಕದ ನಾಗರಹೊಳೆ ಅರಣ್ಯದಿಂದ ಕಾಡಾನೆಗಳು ಮತ್ತು ಕಾಡು ಹಂದಿಗಳು ಸೇರಿದಂತೆ ವಿವಿಧ ವನ್ಯ ಪ್ರಾಣಿಗಳು ನೇರವಾಗಿ ರೈತರ ಜಮೀನುಗಳಿಗೆ ನುಗ್ಗುತ್ತಿವೆ.
ಈ ನಡುವ ಗ್ರಾಮದ ರೈತರಾದ ಲಿಂಗರಾಜು ಸುಮಾರು 6 ಎಕರೆ ಜಮೀನಿನ ಪೈಕಿ ಒಂದು ಎಕರೆ ಪ್ರದೇಶದಲ್ಲಿ ಮೆಕ್ಕೆ ಜೋಳದ ಬೀಜ ತಂದು ಬೆಳೆ ಬೆಳೆದಿದ್ದರು. ಆದರೆ ಕಾಡಾನೆಗಳು ಹಾಗೂ ಹಂದಿಗಳು ಜಮೀನಿಗೆ ದಾಳಿ ಮಾಡಿದ್ದು ಬೆಳೆ ನಾಶವಾಗಿದೆ, ಇದರಿಂದಾಗಿ ಅವರಿಗೆ ಸುಮಾರು 30 ಸಾವಿರಕ್ಕೂ ಹೆಚ್ಚು ರೂ ನಷ್ಟ ಉಂಟಾಗಿದೆ. ಈ ಬಗ್ಗೆ ಅಳಲು ತೋಡಿಕೊಂಡಿರುವ ಅವರು, ಈ ಸಂಬಂಧ ಪರಿಹಾರಕ್ಕಾಗಿ ಸರಗೂರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಡಿ ಆರ್ ಎಫ್ ಓ ಲಿಂಗರಾಜು ಹಾಗೂ ಸಿಬ್ಬಂದಿ ವರ್ಗ ಸ್ಥಳ ತೆರಳಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.