ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಶಾಲಾ ಮಕ್ಕಳನ್ನು ಗುರಿಯಾಗಿಸಿಕೊಂಡು ಜಾರಿಗೆ ತಂದಿದ್ದ ‘ಯುವ ಮಿತ್ರ’ ಕಾರ್ಯಕ್ರಮ ಯಶಸ್ವಿಯಾಗುತ್ತಿದ್ದಂತೆಯೇ, ಇದೇ ಮಾದರಿಯಲ್ಲಿ ‘ರೈತ ಮಿತ್ರ’ ಕಾರ್ಯಕ್ರಮ ಜಾರಿಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ರೈತರಿಗೆ ಸಫಾರಿ ವ್ಯವಸ್ಥೆ ಕಲ್ಪಿಸಿ, ಅವರಲ್ಲಿ ಕಾಡು, ವನ್ಯಜೀವಿ ಹಾಗೂ ಅವುಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು ರೈತ ಮಿತ್ರದ ಉದ್ದೇಶವಾಗಿದ್ದು, ಯೋಜನೆ ಅನುಷ್ಠಾನಕ್ಕೆ ಬಂಡೀಪುರದ ಅಧಿಕಾರಿಗಳು ಇಲಾಖೆಯ ಹಿರಿಯ ಅಧಿಕಾರಿಗಳ ಒಪ್ಪಿಗೆ ಪಡೆದಿದ್ದು, ಸಫಾರಿ ವಾಹನ ಖರೀದಿಸುವುದಕ್ಕಾಗಿ ಜಿಲ್ಲಾ ಖನಿಜ ನಿಧಿಯಿಂದ ನೆರವು ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ.
ಕಾಡಿಗೆ ಬೆಂಕಿ ಬಿದ್ದ ಸಂದರ್ಭದಲ್ಲಿ ಅರಣ್ಯದ ಪಕ್ಕದ ಗ್ರಾಮಸ್ಥರೂ ನೆರವಿಗೆ ಧಾವಿಸುತ್ತಾರೆ. ಇನ್ನೂ ಕೆಲವರು ಅರಣ್ಯ ಇಲಾಖೆಯ ಮೇಲಿನ ಕೋಪದಿಂದ ಬೆಂಕಿಯನ್ನೂ ಹಚ್ಚುತ್ತಾರೆ. ಪ್ರಾಣಿಗಳಿಗೆ ವಿಷವನ್ನೂ ಉಳಿಸುತ್ತಿದ್ದಾರೆ. ಇದನ್ನು ತಪ್ಪಿಸುವುದಕ್ಕಾಗಿ ಕಾಡಂಚಿನ ರೈತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯ, ವನ್ಯಜೀವಿ ಸಂರಕ್ಷಣೆಯಲ್ಲಿ ಅವರನ್ನು ಭಾಗಿಯಾಗುವಂತೆ ಮಾಡುವ ಪ್ರಯತ್ನ ರೈತ ಮಿತ್ರದ ಉದ್ದೇಶವಾಗಿದೆ.
‘ಪ್ರತಿ ದಿನ ಕಾಡಂಚಿನ ರೈತರಿಗೆ ಕಾಡನ್ನು ತೋರಿಸುವುದು, ಸ್ಥಳೀಯ ರೈತರು ಬಂಡೀಪುರ ಯೋಜನೆಯ ಪ್ರಯೋಜನಗಳನ್ನು ಪಡೆಯಬೇಕು ಎಂಬುದು ಇಲಾಖೆಯ ಆಶಯ. ಅವರನ್ನು ಸಫಾರಿಗೆ ಕರೆದೊಯ್ಯಲು ಪ್ರತ್ಯೇಕ ವಾಹನದ ಅಗತ್ಯವಿದೆ. ಈ ಹಿಂದೆ ಯುವ ಮಿತ್ರ ಕಾರ್ಯಕ್ರಮಕ್ಕೆ ಜಿಲ್ಲಾ ಖನಿಜ ನಿಧಿಯಿಂದ ನೆರವು ಸಿಕ್ಕಿತ್ತು. ಅದೇ ಮಾದರಿಯಲ್ಲಿ ಈ ಯೋಜನೆಗೂ ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್ ಕುಮಾರ್ ತಿಳಿಸಿದ್ದಾರೆ.