ಚಾಮರಾಜನಗರ : ಹನೂರು ತಾಲ್ಲೂಕಿನ ಹೂಗ್ಯಂ ಅರಣ್ಯ ವಲಯದ ಸಿಬ್ಬಂದಿ ರೈತ ಮಹಿಳೆ ಮೇಲೆ ಹಲ್ಲೆ ನಡೆಸಿ, ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಪಟ್ಟಣದ ಎಂ ಜಿ ಎಸ್ ವಿ ಕಾಲೇಜು ಮೈದಾನದಲ್ಲಿ ಜಮಾಯಿಸಿದ ನೂರಾರು ರೈತ ಮುಖಂಡರು, ಅರಣ್ಯಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಚೇರಿಗೆ ಬರುವ ಪ್ರತಿಭಟನಾಕಾರರನ್ನು ತಡೆಗಟ್ಟುವ ಸಲುವಾಗಿ ಮುಚ್ಚಲಾಗಿದ್ದ ಕಚೇರಿಯ ಗೇಟ್ ನ್ನು ರೈತರು ತಳ್ಳಿ ಕಚೇರಿಯೊಳಗೆ ನುಗ್ಗಿದರು. ಈ ವೇಳೆ ಎಸ್ಐ ಮಹೇಶ್ ಪ್ರತಿಭಟನಾಕಾರರನ್ನು ತಡೆಯುವ ವೇಳೆ ಘರ್ಷಣೆ ಉಂಟಾಗಿ ಅರ್ಧ ಗಂಟೆ ಕಾಲ ರೈತರು, ಅಧಿಕಾರಿ ನಡುವೆ ಚರ್ಚೆ ನಡೆದು, ಬಳಿಕ ಸಬ್ ಇನ್ಸ್ಪೆಕ್ಟರ್ ಕ್ಷಮೆಯಾಚಿಸಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರಿಸಿದರು.
ಡಿ.ಎಫ್.ಒ.ಕಚೇರಿಗೆ ತೆರಳಿದ ಪ್ರತಿಭಟನಾ ಕಾರರು, ಕಳೆದ ತಿಂಗಳ 22 ರಂದು ಹೂಗ್ಯಂ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ರೈತ ಮಹಿಳೆಯ ಕುಟುಂಬದ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ರೈತ ಮಹಿಳೆ ಕುಟುಂಬದ ಮೇಲೆ ಹಲ್ಲೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಅಮಾನತ್ತು ಗೊಳಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಆರ್. ನರೇಂದ್ರರವರ ಜೊತೆಗೂಡಿದ ರೈತರು, ಅರಣ್ಯ ಇಲಾಖೆ ಡಿಸಿಎಫ್ ಸಂತೋಷ್ ಕುಮಾರ್ ಜತೆ ಚರ್ಚೆ ನಡೆಸಿದರು. ನಂತರ ಅರಣ್ಯಾಧಿಕಾರಿಗಳು ಮಾತನಾಡಿ, ರೈತರ ಕ್ಷಮೆಯಾಚಿಸಿ, ಹಲ್ಲೆ ಮಾಡಿದ ಸಿಬ್ಬಂದಿಯನ್ನು ಒಂದು ವಾರದಲ್ಲಿ ಬೇರೆಡೆಗೆ ವರ್ಗಾವಣೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆಗಳು ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಟ್ಟರು.