ಉಡುಪಿ: ದ್ವಿಚಕ್ರ ವಾಹನವೊಂದು ನಿಂತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದು, ಆತನ ತಾಯಿ ಗಾಯಗೊಂಡ ಘಟನೆ ಉಡುಪಿ ಉದ್ಯಾವರ ಹಲೀಮಾ ಸಾಬ್ಜು ಆಡಿಟೋರಿಯಂ ಎದುರು ಇಂದು ಬೆಳಿಗ್ಗೆ ಸಂಭವಿಸಿದೆ.
ಮೃತ ಯುವಕನನ್ನು ಉಚ್ಚಿಲ ಪೊಲ್ಯ ನಿವಾಸಿ ಅಝೀಜ್ ಎಂಬವರ ಪುತ್ರ ಮುಫ್ರೀನ್ (18 ) ಎಂದು ಗುರುತಿಸಲಾಗಿದೆ. ಆತನ ತಾಯಿ ಹಾಜಿರಾ ಭಾನು ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ 8.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಿಕೊಂಡಿರುವ ಅಝೀಜ್ ಹೆಜ್ಮಾಡಿಯಲ್ಲಿ ನೆಲೆಸಿದ್ದು, ಇತ್ತೀಚೆಗೆ ಊರಿಗೆ ಬಂದು ವಾಪಾಸಾಗಿದ್ದರು.
ಇಂದು ಬೆಳಗ್ಗೆ ಹೆಜ್ಮಾಡಿಯಿಂದ ಮುಫ್ರೀನ್ ತನ್ನ ತಾಯಿಯನ್ನು ಹೈಟೆಕ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದ್ವಿಚಕ್ರ ವಾಹನವೊಂದರಲ್ಲಿ ಕರೆದೊಯ್ಯುತ್ತಿದ್ದ ವೇಳೆ ಉದ್ಯಾವರ ಹಲೀಮಾ ಸಾಬ್ಜು ಆಡಿಟೋರಿಯಂ ಮುಂದೆ ನಿಲ್ಲಿಸಲಾಗಿದ್ದ ಬೊಲೆರೋ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಇದರ ಪರಿಣಾಮ ಮುಫ್ರೀನ್ ಗಂಭೀರ ಗಾಯಗೊಂಡಿದ್ದು, ಆತನನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಈ ವೇಳೆ ಆತನ ತಾಯಿ ಹಾಜಿರಾ ಭಾನು ಗಂಭೀರ ಗಾಯಗೊಂಡಿದ್ದು, ಅವರನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ತಲೆಯ ಭಾಗಕ್ಕೆ ಗಾಯವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ