ಚಾಮರಾಜನಗರ: ಬಾವಿಯೊಳಗೆ ಬಿದ್ದು ಒದ್ದಾಡುತ್ತಿದ್ದ ಕೊಳಕು ಮಂಡಲ ಹಾವುಗಳನ್ನು ಬರೋಬ್ಬರಿ 3 ತಾಸು ಕಾರ್ಯಾಚರಣೆ ನಡೆಸಿ ಮೇಲಕ್ಕೆತ್ತಿರುವ ಘಟನೆ ಯಳಂದೂರಿನಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ಬಳೆಪೇಟೆಯ ರಾಜು ಎಂಬವರ ಮನೆ ಸಮೀಪ ಇದ್ದ ಬಾವಿಯಲ್ಲಿ ಭಾರಿ ಗಾತ್ರದ ಎರಡು ವಿಷಪೂರಿತ ಮಂಡಲ ಹಾವುಗಳು ಬಿದ್ದ ವಿಚಾರ ಅರಿತ ಉರಗ ಪ್ರೇಮಿ ಸಂತೇಮರಹಳ್ಳಿಯ ಸ್ನೇಕ್ ಮಹೇಶ್ ಸ್ಥಳಕ್ಕೆ ತೆರಳಿ ಎರಡು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ.
ರಾತ್ರಿ ವೇಳೆಯಲ್ಲಿ ಬಾವಿಗೆ ಎರಡು ಹಾವುಗಳು ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದವು. ಸ್ನೇಕ್ ಮಹೇಶ್ 3 ತಾಸು ಕಾರ್ಯಾಚರಣೆ ಕೈಗೊಂಡು ಸುರಕ್ಷಿತವಾಗಿ ಮೇಲಕ್ಕೆತ್ತಿ ಹಾವುಗಳನ್ನು ಕಾಡಿಗೆ ಬಿಟ್ಟಿದ್ದಾರೆ.
ವಿಷಪೂರಿತ ಮಂಡಲ ಹಾವುಗಳು: ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸ್ನೇಕ್ ಮಹೇಶ್, ಮಂಡಲ ಹಾವು ಭಾರತದ ಅತ್ಯಂತ ವಿಷಕಾರಿ ನಾಲ್ಕು ಹಾವುಗಳಲ್ಲಿ ಒಂದಾಗಿದೆ. ಭಾರತದಲ್ಲಿ ಹಾವು ಕಡಿತದಿಂದ ಮೃತಪಡುವ ಜನರಲ್ಲಿ ಹೆಚ್ಚಿನ ಜನ ಈ ಕೊಳಕು ಮಂಡಲದ ಜೊತೆಗೆ ನಾಗರಹಾವು, ಕಟ್ಟಾವು ಹಾಗೂ ಗರಸಗ ಮಂಡಲ ಎಂಬ ನಾಲ್ಕು ಹಾವುಗಳ ಕಡಿತದಿಂದ ಮಾತ್ರ ಸಾವನ್ನಪ್ಪುತ್ತಾರೆ. ವಿಷ ರಹಿತವಿರಲಿ ಅಥವಾ ವಿಷಕಾರಿ ಇರಲಿ, ಹಾವುಗಳು ಪರಿಸರದ ಸಮತೋಲನದಲ್ಲಿ ಇತರ ಜೀವಿಗಳಂತೆ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದ್ದಾರೆ.