ಚಾಮರಾಜನಗರ: ಜಿಲ್ಲೆಯಲ್ಲಿ ಪ್ರತಿಷ್ಠಿತ ಮೀಸಲು ಕ್ಷೇತ್ರವಾಗಿರುವ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದ್ದರೂ ಜೆಡಿಎಸ್ ಮತ್ತು ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಿರುವುದು ಇದೆರಡು ಪಕ್ಷಗಳ ರಾಜ್ಯನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಆದರೆ ಬಿಜೆಪಿಯಲ್ಲಿ ಯಾವುದೇ ಆಕಾಂಕ್ಷಿಗಳು ಇಲ್ಲದಿರುವುದರಿಂದ ಹಾಲಿ ಶಾಸಕ ಎನ್.ಮಹೇಶ್ ಅವರಿಗೆ ಹಾದಿ ಸುಗಮವಾಗಿದೆ.
ಹಾಲಿ ಶಾಸಕ ಎನ್.ಮಹೇಶ್ ಅವರನ್ನು ಕಟ್ಟಿ ಹಾಕಲು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಯತ್ನ ಪಡುತ್ತಿದ್ದರೂ ಇದೆರಡು ಪಕ್ಷಗಳಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಜತೆಗೆ ಟಿಕೆಟ್ ಗೆ ಕಸರತ್ತು ಕೂಡ ನಡೆಸುತ್ತಿದ್ದಾರೆ. ಹಾಗಾಗಿ ಯಾರಿಗೆ ಟಿಕೆಟ್ ನೀಡುತ್ತಾರೆ ಎನ್ನುವುದೇ ಕಗ್ಗಂಟಾಗಿ ಉಳಿದಿದೆ. ಸದ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಟಿಕೆಟ್ ಘೋಷಣೆ ಮಾಡದಿರುವುದರಿಂದ ಎನ್.ಮಹೇಶ್ ನೆಮ್ಮದಿಯುಸಿರು ಬಿಡುವಂತಾಗಿದೆ.
ಹಾಗೆನೋಡಿದರೆ ಸ್ಪರ್ಧೆ ಬಯಸಿರುವ ನಾಯಕರು ಘಟಾನುಘಟಿಗಳಾಗಿದ್ದು, ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಒಂದು ವೇಳೆ ಒಬ್ಬರಿಗೆ ಟಿಕೆಟ್ ನೀಡಿದರೆ ಉಳಿದ ಆಕಾಂಕ್ಷಿಗಳಿಗೆ ಬೇಸರವಾಗುವುದಂತು ಖಚಿತ. ಹೀಗಿರುವಾಗ ಅವರು ಒಗ್ಗಟ್ಟಿನಿಂದ ಪಕ್ಷಕ್ಕಾಗಿ ದುಡಿದು ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತಾರಾ? ಎಂಬುದೇ ಪ್ರಶ್ನೆಯಾಗಿದೆ.
ಕಳೆದ 2018ರಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಈಗಿನ ಬಿಜೆಪಿ ಶಾಸಕರಾಗಿರುವ ಎನ್.ಮಹೇಶ್ ಅವರು ಬಿಎಸ್ ಪಿಯಿಂದ ಸ್ಪರ್ಧಿಸಿದ್ದರು. ಅವರಿಗೆ ಜೆಡಿಎಸ್ ಬೆಂಬಲ ನೀಡಿತ್ತು. ಬದಲಾದ ರಾಜಕೀಯದಲ್ಲಿ ಎನ್.ಮಹೇಶ್ ಅವರು ಬಿಎಸ್ ಪಿಯಿಂದ ದೂರವಾಗಿ ಬಿಜೆಪಿ ಸೇರಿದರು. ಈಗ ಅವರಿಗೆ ಪಕ್ಷದ ಬಲ ಜತೆಗೆ ವೈಯಕ್ತಿಕ ವರ್ಚಸ್ಸು ಮತ್ತು ದಲಿತ, ಹಿಂದುಳಿದ ವರ್ಗಗಳ ಬೆಂಬಲವೂ ಇರುವುದರಿಂದ ಗೆಲುವು ಕಷ್ಟವಾಗಲಾರದು ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಿರುವಾಗ ಅವರಿಗೆ ಟಕ್ಕರ್ ಕೊಡಬೇಕಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಯಾರಿಗೆ ಟಿಕೆಟ್ ನೀಡುತ್ತಾರೆ ಎನ್ನುವುದೇ ಗೊಂದಲವಾಗಿದೆ.
ಜೆಡಿಎಸ್ ಕೊಳ್ಳೇಗಾಲ ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದನ್ನು ಇದುವರೆಗೆ ಘೋಷಿಸಿಲ್ಲ. ಆದರೆ ಜೆಡಿಎಸ್ ನಿಂದ ಸ್ಪರ್ಧಿಸಲು ಪುಟ್ಟಸ್ವಾಮಿ ಮತ್ತು ವಾಲೆಮಹದೇವು ಅವರು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಪುಟ್ಟಸ್ವಾಮಿ ಅವರು ಕ್ಷೇತ್ರದುದ್ದಕ್ಕೂ ಸಂಚಾರ ಮಾಡಿ ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದ್ದರೆ, ಇನ್ನೊಬ್ಬ ಆಕಾಂಕ್ಷಿ ವಾಲೆ ಮಹದೇವು ಕೂಡ ಕೈಕಟ್ಟಿ ಕೂರದೆ ತಮ್ಮದೇ ಕೆಲಸ ಕಾರ್ಯಗಳಿಂದ ರಾಜ್ಯ ನಾಯಕರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇಬ್ಬರೂ ಕ್ಷೇತ್ರದಲ್ಲಿ ಅಡ್ಡಾಡುತ್ತಿದ್ದು, ನಾನೇ ಅಭ್ಯರ್ಥಿ ಎನ್ನುತ್ತಿದ್ದಾರೆ. ಇವರ ನಡುವೆ ಜೆಡಿಎಸ್ ರಾಜ್ಯ ನಾಯಕರು ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವುದೇ ಕುತೂಹಲವಾಗಿದೆ.
ಜೆಡಿಎಸ್ ಗೆ ಹೋಲಿಸಿದರೆ ಕಾಂಗ್ರೆಸ್ ನಲ್ಲಿ ಮೂರು ಮಂದಿ ಘಟಾನುಘಟಿಗಳು ಟಿಕೆಟ್ ಗಾಗಿ ಹಾತೊರೆಯುತ್ತಿದ್ದಾರೆ. ಎ.ಆರ್. ಕೃಷ್ಣಮೂರ್ತಿ, ಮಾಜಿ ಶಾಸಕ ಬಾಲರಾಜ್ ಹಾಗೂ ಎಸ್ ಜಯಣ್ಣ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಈ ಮೂರು ಮಂದಿಯೂ ಪ್ರಬಲ ನಾಯಕರಾಗಿದ್ದಾರೆ. ಈ ಪೈಕಿ ಎ.ಆರ್.ಕೃಷ್ಣಮೂರ್ತಿ ಮತ್ತು ಎಸ್.ಜಯಣ್ಣ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದರೆ, ಮಾಜಿ ಶಾಸಕ ಬಾಲರಾಜ್ ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತರಾಗಿದ್ದಾರೆ. ಈ ಮೂರು ನಾಯಕರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇವರ ನಡುವೆ ಯಾರು ಕಾಂಗ್ರೆಸ್ ನ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎನ್ನುವುದೇ ರಹಸ್ಯವಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿರುವ ಗೊಂದಲ ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಬಾರಿ ಶಾಸಕರಾಗುವ ಕನಸು ಕಾಣುತ್ತಿರುವ ಎನ್.ಮಹೇಶ್ ಗೆ ವರವಾದರೂ ಅಚ್ಚರಿಯಿಲ್ಲ. ಆದರೆ ಕ್ಷೇತ್ರದ ಚುನಾವಣಾ ಇತಿಹಾಸ ನೋಡಿದರೆ ಜನ ಬದಲಾವಣೆ ಬಯಸಿದ್ದು ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಅಭ್ಯರ್ಥಿಗಳ ಘೋಷಣೆಯಾದ ಬಳಿಕವಷ್ಟೆ ಪೈಪೋಟಿಯ ತೀವ್ರತೆ ಗೊತ್ತಾಗಲಿದೆ. ಒಂದು ವೇಳೆ ಎರಡು ಪಕ್ಷಗಳಲ್ಲಿನ ಟಿಕೆಟ್ ನೀಡುವ ವಿಚಾರದಲ್ಲಿ ಗೊಂದಲಗಳು ಏರ್ಪಟ್ಟು ಆಕಾಂಕ್ಷಿಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡಿದರೆ ಅದರ ಲಾಭ ಎನ್.ಮಹೇಶ್ ಅವರಿಗೆ ಆಗುವ ಸಾಧ್ಯತೆಯಿದೆ.
ಇದೆಲ್ಲದರ ನಡುವೆ ಈಗಾಗಲೇ ಮತದಾರರ ಬಳಿಗೆ ತೆರಳುತ್ತಿರುವ ಎನ್ ಮಹೇಶ್ ಮತ್ತು ಅವರ ಬೆಂಬಲಿಗರು ಎರಡನೇ ಬಾರಿ ಶಾಸಕರಾಗಲು ಆಶೀರ್ವದಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷಗಳ ನಾಯಕರ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಮಹೇಶ್ ಅವರು ತಾವು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಆದರೆ ಮತದಾರರು ಈ ಬಾರಿ ಯಾವ ರೀತಿಯ ತೀರ್ಮಾನ ಮಾಡುತ್ತಾರೆ ಎನ್ನುವುದೇ ಗೌಪ್ಯವಾಗಿ ಉಳಿದಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಬಾರಿಯ ಚುನಾವಣೆ ಕ್ಷೇತ್ರದಲ್ಲಿ ಅಷ್ಟೊಂದು ಸುಲಭವಾಗಿ ಉಳಿದಿಲ್ಲ. ಮೂರು ಪಕ್ಷಗಳ ಅಭ್ಯರ್ಥಿಗಳ ನಡುವೆ ಪೈಪೋಟಿಯಂತು ಇದ್ದೇ ಇರುತ್ತದೆ. ಹೀಗಾಗಿ ಮತದಾರರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದರ ಮೇಲೆ ಇಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳ ಗೆಲುವು ನಿಂತಿದೆ. ಅದಕ್ಕಿಂತ ಹೆಚ್ಚಾಗಿ ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ಎನ್.ಮಹೇಶ್ ಅವರಿಗೆ ಪೈಪೋಟಿ ನೀಡಲು ಜೆಡಿಎಸ್ ಮತ್ತು ಕಾಂಗ್ರೆಸ್ ನಿಂದ ಅಭ್ಯರ್ಥಿಗಳು ಯಾರು ಎನ್ನುವುದು ಮೊದಲು ಗೊತ್ತಾಗಬೇಕಿದೆ.