ಪಿರಿಯಾಪಟ್ಟಣ: ಮಳೆ ಹಾನಿ ಸಂಬಂಧ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಲು ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆ ಸಹಕಾರದೊಂದಿಗೆ ವಾರ್ ರೂಂ ತೆರೆದು ಸಹಾಯವಾಣಿ(08223 – 274007) ಆರಂಭಿಸಲಾಗಿದೆ ಎಂದು ತಹಶೀಲ್ದಾರ್ ಕುಂಞಿ ಅಹಮದ್ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ತಹಶೀಲ್ದಾರ್ ಅವರು ಮಾತನಾಡಿ ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆಯವರು ಮುಂಜಾಗ್ರತ ಕ್ರಮವಹಿಸಿ ಶಿಥಿಲ ಕೊಠಡಿಗಳ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ದುರಸ್ತಿಗೆ ಶೀಘ್ರ ಕ್ರಮ ವಹಿಸಬೇಕು, ಮಳೆಗಾಲ ಸಂದರ್ಭ ಹಾಳಾಗುವ ರಸ್ತೆ ಚರಂಡಿ ಸೇತುವೆಗಳ ದುರಸ್ತಿಗೆ ಸಂಬಂಧಿಸಿದ ಇಲಾಖೆಯವರು ಮುಂಜಾಗ್ರತಾ ಕ್ರಮ ವಹಿಸಿ ಮಾಹಿತಿ ನೀಡಬೇಕು ಶೀಘ್ರ ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ ತಾಲೂಕು ಆಡಳಿತ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸಹಕಾರದೊಂದಿಗೆ ಟಾಸ್ಕ್ ಫೋರ್ಸ್ ಸಮಿತಿ ರಚಿಸಿ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ.
ಮಳೆ ಹಾನಿಯಿಂದಾಗುವ ಮನೆ ಕುಸಿತ ಹಾಗೂ ಬೆಳೆ ಹಾನಿಯ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಅಂದಾಜು ಪಟ್ಟಿ ನೀಡಬೇಕು, ಜಾನುವಾರು ಸಾವು ಹಾಗೂ ಕೊಟ್ಟಿಗೆ ಹಾನಿಯ ಬಗ್ಗೆ ಶೀಘ್ರ ಮಾಹಿತಿ ಪಡೆದು ಘಟನೆ ಸಂಭವಿಸಿದ 24 ಗಂಟೆಯ ಒಳಗೆ ಪರಿಹಾರಕ್ಕೆ ಮುಂದಾಗಬೇಕು, ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಹಾನಿಯಾಗುವ ಹಾರನಹಳ್ಳಿ ಹೋಬಳಿಯನ್ನು ನೆರೆ ಪ್ರವಾಹ ಪೀಡಿತ ಪ್ರದೇಶ ಎಂದು ಗುರುತಿಸಿ ಮೂರು ಗಂಜಿ ಕೇಂದ್ರಗಳನ್ನು ತೆರೆಯಲು ಸ್ಥಳ ಗುರುತಿಸಲಾಗಿದೆ, ತಾಲೂಕು ಆಡಳಿತ ಭವನದಲ್ಲಿ ಮಳೆ ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ದಿನದ 24 ಗಂಟೆಯೂ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಪಾಳಿವಾರು ಕರ್ತವ್ಯ ನಿರ್ವಹಿಸಲಿದ್ದು ಸಾರ್ವಜನಿಕರು ಮಳೆ ಹಾನಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಸಹಾಯವಾಣಿ ಸಂಖ್ಯೆ 08223 – 274007 ಸಂಪರ್ಕಿಸಲು ಮನವಿ ಮಾಡಿದ್ದಾರೆ.