ಚಾಮರಾಜನಗರ: ಗಣಪತಿ ಮೂರ್ತಿಯ ವಿಸರ್ಜನೆ ಸಂದರ್ಭದಲ್ಲಿ ರಾತ್ರಿ 10 ಗಂಟೆ ಬಳಿಕ ಡಿಜೆ ಬಳಸದಂತೆ ಸೂಚಿಸಿದ ಪೊಲೀಸರ ಮೇಲೆ ಕೆಲವು ಕಿಡಿಗೇಡಿಗಳು ಕಲ್ಲು ತೂರಿ ಹಲ್ಲೆ ನಡೆಸಿರುವ ಘಟನೆ ನಗರದ ಉಪ್ಪಾರ ಬೀದಿಯಲ್ಲಿ ನಡೆದಿದೆ. ಘಟನೆಯಲ್ಲಿ ಪಟ್ಟಣ ಠಾಣೆ ಸಬ್ ಇನ್ಸ್ಪೆಕ್ಟರ್ ಮಹದೇವ್ ಸೇರಿದಂತೆ ಮೂವರಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 15ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿದ್ದು, ಐವರನ್ನು ಬಂಧಿಸಲಾಗಿದೆ.
ಉಪ್ಪಾರ ಬೀದಿಯ ಕೆ.ಟಿ.ನಾಗಶೆಟ್ಟಿ ಅವರ ನೇತೃತ್ವದಲ್ಲಿ ಮಂಟೇಸ್ವಾಮಿ ದೇವಾಲಯದ ಕೊಂಡ ಹಾಕುವ ಸ್ಥಳದಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಲಾಗಿತ್ತು. ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಟ್ಟಣ ಠಾಣೆ ಸಬ್ ಇನ್ಸ್ಪೆಕ್ಟರ್ ಮಹದೇವ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ರಾತ್ರಿ 10.30ರ ಬಳಿಕವೂ ಸಂಘಟಕರು ಧ್ವನಿವರ್ಧಕದಲ್ಲಿ ಜೋರಾಗಿ ಹಾಡು ಹಾಕಿ ನೃತ್ಯ ಮಾಡುತ್ತಿದ್ದಾಗ ಮಹದೇವ್ ಅವರು, ‘ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ಬಳಸಬಾರದು. ಧ್ವನಿ ವರ್ಧಕ, ಡಿಜೆ ಬಳಸಲು ಅನುಮತಿ ನೀಡಿಲ್ಲ. ಡಿಜೆ ನಿಲ್ಲಿಸಿ’ ಎಂದು ಸಂಘಟಕರಿಗೆ ಹೇಳಿದ್ದಾರೆ.
ಈ ವೇಳೆ ಆಕ್ರೋಶಗೊಂಡ ಕಿಡಿಗೇಡಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಎಎಸ್ಐ ಶಿವಶಂಕರ್ ಅವರು ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಘಟನೆಯಲ್ಲಿ ಕಿಡಿಗೇಡಿಗಳು ಸಬ್ ಇನ್ಸ್ಪೆಕ್ಟರ್ ಮಹದೇವ್ ಅವರ ಮೇಲೆ ಕಲ್ಲು ಎಸೆದಿದ್ದು ಇದರಿಂದ ಅವರ ತಲೆಗೆ ಏಟಾಗಿದ್ದರೆ, ಜೀಪು ಚಾಲಕ ಬಸವರಾಜು ಅವರಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ 15ಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್ ದಾಖಲಾಗಿಸಲಾಗಿದ್ದು, ಐವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ.