ಗುಂಡ್ಲುಪೇಟೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಕುತಂತ್ರದಿಂದ ಸೋಲು ಕಾಣಬೇಕಾಯಿತು. ಆದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರ ಗ್ಯಾರಂಟಿ ಗಿಮಿಕ್ ನಡೆಯೋದಿಲ್ಲ ಎಂದು ಮಾಜಿ ಶಾಸಕ ಚಾಮರಾಜನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಹೇಳಿದರು.
ಚಾಮರಾಜನಗರ ಮೀಸಲು ಲೋಕಸಭಾ ಬಿಜೆಪಿ ಅಭ್ಯರ್ಥಿ ಬಾಲರಾಜು ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ʼಈ ಹಿಂದೆ ಪಾಳೆಗಾರತನ ಪ್ರಚಲಿತದಲಿತ್ತು. ಆದರೆ ಈಗ ಎಲ್ಲಾ ಬದಲಾಗಿದೆ, ಪಾಳೆಗಾರತನದ ದಬ್ಬಾಳಿಕೆ ನಡೆಯೋದಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ್ರೆ ಮಾತ್ರ ಗೌರವ ಇರುತ್ತೆ. ಅಧಿಕಾರ ಸಿಕ್ಕಿದಾಕ್ಷಣ ಇಡೀ ತಾಲೂಕು ನಿಮ್ಮ ಮಾತನ್ನ ಕೇಳುತ್ತೆ ಅನ್ನೋದು ಭ್ರಮೆʼ ಎಂದು ಹೆಸರು ಹೇಳದೆ ವಿಪಕ್ಷ ಮುಖಂಡರ ಕುರಿತು ಕಿಡಿಕಾರಿದರು.
ಅಭ್ಯರ್ಥಿ ಬಾಲರಾಜು ಮಾತನಾಡುತ್ತ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಮತಯಾಚನೆ ಮಾಡಲು ನಿಮ್ಮಲ್ಲಿಗೆ ಬಂದಿದ್ದೇನೆ. ಚಾಮರಾಜನಗರದಲ್ಲಿ ನನಗಿಂತಲೂ ಉತ್ತಮ ಅಭ್ಯರ್ಥಿಗಳಿದ್ದರೂ ಸಹ ಪಕ್ಷ ನನಗೆ ಒಂದು ಅವಕಾಶ ಮಾಡಿಕೊಟ್ಟಿದೆ. ಪಕ್ಷದ ನಂಬಿಕೆಯನ್ನ ಉಳಿಸಿಕೊಳ್ಳುತ್ತೇನೆ . ಹಿಂದಿನ ಶಾಸಕರಾದ ನಿರಂಜನ್ ಕುಮಾರ್ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ, ಆದರೆ ಕಳೆದ ಚುನಾವಣೆಯಲ್ಲಿ ಸೋಲನ್ನು ಕಂಡ ಬಳಿಕವೂ ಕ್ಷೇತ್ರದ ಮತದಾರರ ಸಂಪರ್ಕದಲ್ಲಿದ್ದಾರೆ. ಅವರ ಜೊತೆಗೆ ಸಂಸದನಾಗಿ ಕೆಲಸ ಮಾಡಲು ನನಗೊಮ್ಮೆ ಅವಕಾಶ ಮಾಡಿಕೊಡಿ ಎಂದು ನಿವೇದನೆ ಮಾಡಿದರು. ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ಬಳಿಕ ಮೂರು ವರ್ಷದ ಅವಧಿಯಲ್ಲಿ
ಕೊಳ್ಳೇಗಾಲದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ, ರಾಜಕಾರಣದಲ್ಲಿ 30 ವರ್ಷ ಒಡನಾಟವಿದೆ, ನನ್ನ ತಂದೆ ತಾಯಿ ಸಾರ್ವಜನಿಕರ ಸೇವೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡವರು , ಗ್ರಾಮಾಂತರ ಪ್ರದೇಶದ ಜನರಿಗೆ ಉತ್ತಮ ಸೇವೆ ಸಲ್ಲಿಸಿ ಎಲ್ಲರ ವಿಶ್ವಾಸಗಳಿಸಿದ್ದವರು ಇಷ್ಟು ಕೆಲಸ ಮಾಡಲು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಕೆಲಸ ಮಾಡಿದವರು ಅಂತವರ ಮಗನಾದ ನಾನು ನಿಸ್ವಾರ್ಥನಾಗಿ ನಿಮ್ಮ ಸೇವೆ ಮಾಡುತ್ತೇನೆ ನನಗೊಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.