ಬೆಂಗಳೂರು: ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಟೀ, ಕಾಫಿ ಕುಡಿಯಲು 200 ರೂ.ನಿಂದ 500 ರೂ. ಕೊಡಬೇಕು. ಒಂದು ತಿಂಡಿ ಮಾಡಲು 500 ರೂ.ಗಳಿಂದ 1,000 ರೂ. ಕೊಡಬೇಕು ಎಂದು ಕೊರಗುವ ಜನರಿಗೆ ಈಗ ಸಿಹಿಸುದ್ದಿ ಸಿಗುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೇವಲ 10 ರೂ.ಗೆ ಉಟವನ್ನು ನೀಡಲು ಸರ್ಕಾರದಿಂದಲೇ ಬಡವರ ಹೋಟೆಲ್ ಎಂದೇ ಕರೆಯಲಾಗುವ ಇಂದಿರಾ ಕ್ಯಾಂಟೀನ್ ಆರಂಭಿಸಲು ಸರ್ಕಾರ ಸಚಿವ ಸಂಪುಟದ ಸಭೆಯನ್ನು ನಿರ್ಣಯ ಕೈಗೊಂಡಿದೆ.
ಈಗಾಗಲೇ ಬೆಂಗಳೂರಿನಲ್ಲಿ 175ಕ್ಕೂ ಅಧಿಕ ಇಂದಿರಾ ಕ್ಯಾಂಟೀನ್ಗಳು ಕಾರ್ಯ ನಿರ್ವಹಿಸುತ್ತಿವೆ. ಜೊತೆಗೆ ರಾಜ್ಯಾದ್ಯಂತ ಎಲ್ಲ ನಗರ, ಪಟ್ಟಣ ಪ್ರದೇಶಗಳಲ್ಲಿಯೂ ಇಂದಿರಾ ಕ್ಯಾಂಟೀನ್ಗಳಲ್ಲಿ ಕೇವಲ 5 ರೂ.ಗೆ ತಿಂಡಿ ಹಾಗೂ 10 ರೂ.ಗೆ ಊಟವನ್ನು ಸರಬರಾಜು ಮಾಡಲಾಗುತ್ತಿದೆ. ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ನಲ್ಲಿ ಗುಣಮಟ್ಟದ ಊಟ ಸರಬರಾಜು ಮಾಡುತ್ತಿಲ್ಲವೆಂದು ಅವುಗಳನ್ನು ಮುಚ್ಚಲು ಚಿಂತನೆ ಮಾಡಲಾಗಿತ್ತು. ಆದರೆ, ಈಗ ಪುನಃ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿರಾ ಕ್ಯಾಂಟೀನ್ನ ಊಟ ಹಾಗೂ ತಿಂಡಿಯ ಮೆನುವನ್ನು ಬದಲಾವಣೆ ಮಾಡಿದ್ದಾರೆ. ಈಗ ರಾಗಿ ಮುದ್ದೆ, ಮಂಗಳೂರು ಬನ್ಸ್ ಸೇರಿ ವಿವಿಧ ಊಟವನ್ನು ನೀಡಲಾಗುತ್ತಿದೆ.
ಈಗ ಮತ್ತೊಂದು ಸರ್ಕಾರದ ಇಂದಿರಾ ಕ್ಯಾಂಟೀನ್ ಊಟವನ್ನು ದುಬಾರಿ ಆಹಾರ ಮಾರಾಟ ಮಾಡುವ ಸ್ಥಳಗಳಲ್ಲಿಯೂ ಆರಂಭಿಸಬೇಕು ಎನ್ನುವ ಉದ್ದೇಶವನ್ನು ಹೊಂದಿದೆ. ಆದ್ದರಿಂದ ಜನಸಾಮಾನ್ಯರು, ಮಧ್ಯಮ ವರ್ಗದವರು, ಉದ್ಯಮಿಗಳು ಹಾಗೂ ಐಷಾರಾಮಿ ಜೀವನ ಮಾಡುವವರು ಸೇರಿದಂತೆ, ರಾಜ್ಯ ಹೊರ ರಾಜ್ಯ, ವಿದೇಶಗಳಿಂದ ಬಂದು ಹೋಗುವ ತಾಣವಾದ ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಇಂದಿರಾ ಕ್ಯಾಂಟೀನ್ ಆರಂಭಿಸಲು ಸರ್ಕಾರ ನಿರ್ಣಯ ಕೈಗೊಂಡಿದೆ.
ಇನ್ನು ವಿಮಾನ ನಿಲ್ದಾಣದಲ್ಲಿ ಪ್ರತಿಯೊಂದಿ ಆಹಾರ ಪದಾರ್ಥಕ್ಕೂ ನೂರಾರು ರೂ. ಖರ್ಚು ಮಾಡಲಾಗದೇ ಹಸಿವಿನಿಂದ ಬಳಲುವ ಕಾರ್ಮಿಕರು, ಸಾಮಾನ್ಯ ವರ್ಗದವರಿಗೆ ಈ ಕ್ಯಾಂಟೀನ್ ಮೂಲಕ 5 ರೂ. ತಿಂಡಿ ಹಾಗೂ 10 ರೂ.ಗೆ ಊಟವನ್ನು ಕೊಡಲು ಸರ್ಕಾರ ಮುಂದಾಗಿದೆ. ಶಿಘ್ರವಾಗಿ, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭ ಮಾಡಲಾಗುತ್ತಿದೆ ಎಂದು ಸ್ವತಃ ಸಿಎಂ ತಿಳಿಸಿದ್ದಾರೆ.