ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಜಕ್ಕಳಿ ಗ್ರಾಮದ ಅರುಳ್ ಸೆಲ್ವ ಸಗಾಯರಾಜ್ ಹಾಗೂ ಪತ್ನಿ ಲ್ಯಾನ್ಸಿ ಲೀನಾ ದಂಪತಿ ದಯಾ ಮರಣಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಐದು ವರ್ಷಗಳ ಹಿಂದೆ ಲ್ಯಾನ್ಸಿ ಲೀನಾ ಮತ್ತು ಅದೇ ಗ್ರಾಮದ ಅರುಳ್ ಸೆಲ್ವ ಸಗಾಯರಾಜ್ ಪ್ರೀತಿಸಿ ಮದುವೆಯಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವಾಸ ಮಾಡಲು ಮನೆ ಇಲ್ಲದ ಕಾರಣ, ಅರುಳ್ ಸೆಲ್ವ ಸಗಾಯರಾಜ್ ತಾಯಿ ಮೋಕ್ಷರಾಣಿ ಅನುಮತಿ ಪಡೆದು ರೂ.4 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಂಡು ಜೀವನ ಮಾಡುತ್ತಿದ್ದಾರೆ.
ಮೂರು ವರ್ಷಗಳಿಂದಲೂ ಮೋಕ್ಷರಾಣಿಯವರು ತಮಗೆ ಸೇರಿದ ನಿವೇಶನವನ್ನು ಖಾಲಿ ಮಾಡಿ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ. ಈ ಸಂಬಂಧ ಮೂರು ಬಾರಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ನ್ಯಾಯಪಂಚಾಯಿತಿ ಮಾಡಿದ್ದಾರೆ.
ನಾವು ಕೂಲಿ ಮಾಡಿ ಜೀವನ ಮಾಡುತ್ತಿದ್ದೇವೆ. ಬಾಡಿಗೆ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಈಗ ಮನೆಯಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಡಿ ಎಂದು ತಾಯಿಗೆ ಮನವಿ ಮಾಡಿಕೊಂಡರೂ ಮತ್ತೆ ಮೋಕ್ಷರಾಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೆಪ್ಟೆಂಬರ್ 10ರೊಳಗೆ ಮನೆ ಖಾಲಿ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ.
ನಮಗೆ ಜೀವನ ಮಾಡಲು ಅವಕಾಶ ನೀಡಿ, ಇಲ್ಲದಿದ್ದರೆ ಮೂರು ವರ್ಷ ಮಗು, ತಿಂಗಳ ಹಸುಗೂಸು, ನನಗೆ ಹಾಗೂ ಗಂಡನಿಗೆ ದಯಾ ಮರಣಕ್ಕೆ ಅನುಮತಿ ನೀಡಿ ಎಂದು ಜಿಲ್ಲಾಧಿಕಾರಿ ಶಿಲ್ಪನಾಗ್ ಅವರಿಗೆ ಬರೆದಿರುವ ಲ್ಯಾನ್ಸಿ ಲೀನಾ ಹೇಳಿದ್ದಾರೆ.