ಚಾಮರಾಜನಗರ: ದೆಹಲಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಬೇಕು, ಭವನದ ಮುಂಭಾಗ ಬಸವಣ್ಣ ಪ್ರತಿಮೆ ನಿರ್ಮಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ತಾಲೂಕಿನ ಮರಿಯಾಲ ಗ್ರಾಮದಲ್ಲಿ ವಾಟಾಳ್ ನಾಗರಾಜ್ ಮಾತನಾಡಿ, ಇಡೀ ವಿಶ್ವಾದ್ಯಂತ ಬಸವ ಜಯಂತಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು, ಚುನಾವಣೆಗಾಗಿ ಎಲ್ಲ ಪಕ್ಷದವರು ಕೂಡ ಬಸವ ಜಯಂತಿಯನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡುವುದು ಸರಿಯಲ್ಲ. ಬಸವಣ್ಣನವರ ಬಗ್ಗೆ ಪ್ರಾಮಾಣಿಕ ಚಿಂತನೆಯಾಗಬೇಕು. ಅವರು ವಿಶ್ವಕ್ಕೆ ಮಾದರಿ. ಒಂದು ಸಂದೇಶವಾಗಿದ್ದಾರೆ. ಆದ್ದರಿಂದ ದೆಹಲಿಯಲ್ಲಿ ನೂತನ ನಿರ್ಮಿಸುತ್ತಿರುವ ಸಂಸತ್ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಬೇಕು. ಭವನ ಮುಂಭಾಗ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದರು.
ಕನ್ನಡ ಚಳವಳಿ ವಾಟಾಳ್ ಪಕ್ಷ ಹಾಗೂ ವಿವಿಧ ಮಠಗಳ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ದೆಹಲಿಯಲ್ಲಿ ನೂತನ ಸಂಸತ್ ಭವನ ಮುಂಭಾಗದಲ್ಲಿ ಬಸವೇಸ್ವರ ಪುತ್ಥಳಿ ನಿರ್ಮಾಣ ಹಾಗೂ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡುವಂತೆ ಸಮ್ಮೇಳನ ನಡೆಸಿ, ಕರ್ನಾಟಕ ಬಂದ್ ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ಕಿರಗಸೂರು, ಮೇಲಾಜಿಪುರ, ಪಣ್ಯದಹುಂಡಿ, ಮರಿಯಾಲ, ಯಲಕ್ಕೂರು ಇತರರ ಗ್ರಾಮಗಳಿಗೆ ತೆರಳಿ ಬಿರುಸಿನ ಮತಯಾಚಿಸಿದರು. ಈ ಸಂದರ್ಭದಲ್ಲಿ ಶಿವಲಿಂಗಮೂರ್ತಿ, ಪಾರ್ಥಸಾರಥಿ ಇತರರು ಹಾಜರಿದ್ದರು.