ಚಾಮರಾಜನಗರ: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಕೊಡಲಾಗಿದ್ದು, ಭಾರತೀಯ ಮಾತೆಯರು ಜಗನ್ಮಾತೆಯರಾಗಿ ಆದರ್ಶಸ್ತ್ರೀಯರಾಗಿ ಈ ಸಮಾಜವನ್ನು ಬೆಳಗಿದ್ದಾರೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿ ಹೇಳಿದರು.
ನಗರದ ಜೋಡಿರಸ್ತೆಯಲ್ಲಿರುವ ಕೆನರಾಬ್ಯಾಂಕ್ ಶಾಖೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇವತ್ತು ವಿಶ್ವಾದಾದ್ಯಂತ ಮಹಿಳಾ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿ ಬಹಳ ಶ್ರೀಮಂತ ಸಂಸ್ಕೃತಿಯಾಗಿದ್ದು, ಮಹಿಳೆಗೆ ವಿಶೇಷ ಸ್ಥಾನಮಾನ ಕೊಡಲಾಗಿದೆ. ವಂದೇ ಮಾತರಂ, ಭಾರತ್ ಮಾತಾಕೀ ಜೈ ಇವು ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಮಾತೆ ತಾಯಿಬೇರು ಇದ್ದಂತೆ. ತಾಯಿ ಬೇರು ಚೆನ್ನಾಗಿದ್ದರೆ ಇಡೀ ವೃಕ್ಷವೇ ಹಚ್ಚಹಸಿರಿನಿಂದ ಕೂಡಿರುತ್ತದೆ. ಹಾಗೆಯೇ ಭಾರತೀಯ ಮಾತೆಯರು ಧಾರಿಣಿಯಾಗಿ, ನಾರಿಣಿಯಾಗಿ ಆದರ್ಶಸ್ತ್ರೀಯಾಗಿ ಈ ಸಮಾಜವನ್ನು ಬೆಳಗಿದ್ದಾರೆ ಎಂದರು.
ಆತ್ಮ ಶಕ್ತಿ, ಮನಸ್ಸಿನ ಶಕ್ತಿ ಎಲ್ಲರಲ್ಲೂ ಕಡಿಮೆಯಾಗುತ್ತಿದೆ. ಮನಸ್ಸು ಜೀವನದ ಒಂದು ಬೀಜ. ಮನಸೆ ಎಲ್ಲವೂ ಮಾಡುತ್ತದೆ. ಮನಸ್ಸನ್ನು ಗೆದ್ದರೆ ಜಗತ್ತನ್ನು ಗೆದ್ದಾಗೇ ಎಂಬ ಅರ್ಥ. ನಾವು ಜೀವನದಲ್ಲಿ ಎಲ್ಲ ಮಾಡಿದರೂ ಕೂಡ ಮನಸ್ಸಿನ ಒತ್ತಡದಿಂದ ಖುಷಿ ಇಲ್ಲದಂತಾಗಿದೆ. ಮನಸ್ಸಿಗೆ ಮುದ ನೀಡುವ ಆಧ್ಯಾತ್ಮಿಕ ಧ್ಯಾನ ಮಾಡುವ ಮೂಲಕ ಜೀವನದಲ್ಲಿ ಉತ್ತಮ ಮನಸ್ಸು ಹೊಂದಬೇಕು ಎಂದು ಸಲಹೆ ನೀಡಿದರು.
ಮುಖಂಡ ಜಿ.ಎಂ.ಗಾಡ್ಕರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ 75 ವರ್ಷಗಳು ಕಳೆದರು ಕೂಡ ತ್ಯಾಗಮಯಿ ಮಹಿಳೆಯರೂ ಶೋಷಣೆ ಒಳಗಾಗುತ್ತಿದ್ದಾರೆ. ಇದೊಂದು ಅಘಾತಕಾರಿ ವಿಷಯವಾಗಿದೆ. ಬ್ಯಾಂಕ್ ಎಂದರೆ ಸಾಲ ಕೊಡುವುದು, ಮರು ಪಾವತಿಸುವುದು ಅಷ್ಠೆಕ್ಕೆ ಸೀಮಿತವಾಗಿರುತ್ತದೆ. ಆದರೆ ಕೆನರಾಬ್ಯಾಂಕ್ ಶಾಖೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿರುವುದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಶಾಖೆಯ ಮುಖ್ಯ ವ್ಯವಸ್ಥಾಪಕ ನಂಜುಂಡಸ್ವಾಮಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಾತೆಯರಿಗೆ ಗೌರಯುತ ಸ್ಥಾನಮಾನ ಕೊಡಲಾಗಿದೆ. ಪುರುಷ ಪ್ರಧಾನ ಭಾರತದೇಶದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಪುರಷರಿಗೆ ಸಮಾನವಾಗಿ ಕೆಲಸ ನಿರ್ವಹಿಸುವ ಮೂಲಕ ಸಾಧನೆ ಮಾಡಿ ತೋರಿಸಿಕೊಟ್ಟಿದ್ದಾರೆ ಎಂದರು. ವ್ಯವಸ್ಥಾಪಕಿ ಶ್ರೀಲಕ್ಷ್ಮಿ, ಬಿ.ಕೆ.ಆರಾಧ್ಯ, ಬ್ಯಾಂಕ್ನ ಸಿಬ್ಬಂದಿ ವರ್ಗದವರು ಹಾಜರಿದ್ದರು.