ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಮಹಾಲಯ ಅಮವಾಸ್ಯೆ, ದಸರಾ, ದೀಪಾವಳಿ ಜಾತ್ರಾ ಮಹೋತ್ಸವ ಸಂಬಂಧ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಅವರು ಸೆ.23ರಿಂದ 26ರವರೆಗೆ ನಡೆಯಲಿರುವ ಮಹಾಲಯ ಅಮವಾಸ್ಯೆ, ಅಕ್ಟೋಬರ್ 3ರಿಂದ 6ರವರೆಗೆ ನಡೆಯಲಿರುವ ದಸರಾ ಜಾತ್ರೆ, ಅಕ್ಟೋಬರ್ 22ರಿಂದ 27ರವರೆಗೆ ನಡೆಯಲಿರುವ ದೀಪಾವಳಿ ಜಾತ್ರೆ ಸಿದ್ದತೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವಗಳಿಗೆ ಕ್ಷೇತ್ರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಕುಡಿಯುವ ನೀರಿನ ಸರಬರಾಜು ಸಮರ್ಪಕವಾಗಿರಬೇಕು. ಅಲ್ಲಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯೂ ಇರಬೇಕು. ಸ್ನಾನದ ವ್ಯವಸ್ಥೆಗಾಗಿ ಅಂತರಗಂಗೆ ಪಕ್ಕದಲ್ಲಿ ನಿರ್ಮಿಸಲಾಗಿರುವ ಷವರ್ಗಳಲ್ಲಿ ಅನುಕೂಲ ಕಲ್ಪಿಸಬೇಕು. ಭಕ್ತಾಧಿಗಳಿಗೆ ನೆರಳಿನ ವ್ಯವಸ್ಥೆ ಇರಬೇಕು. ಶಾಮಿಯಾನ ಅಳವಡಿಕೆ ಮೂಲಕವು ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಅಂತರಗಂಗೆಯಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ತಾತ್ಕಾಲಿಕ ಶೌಚಾಲಯಗಳನ್ನು ಅಳವಡಿಸಬೇಕು. ಕ್ಷೇತ್ರದಾದ್ಯಂತ ಸ್ವಚ್ಚತೆಗೆ ವಿಶೇಷ ಗಮನ ನೀಡಬೇಕು. ಪ್ರತಿದಿನ ಸ್ವಚ್ಚತಾ ಕಾರ್ಯಗಳು ಆಗಿಂದಾಗ್ಗೆ ನಡೆಯುತ್ತಿರಬೇಕು ಎಂದು ಸೂಚಿಸಿದರು.
ಜಾತ್ರೆ ನಡೆಯುವ ದಿವಸಗಳಲ್ಲಿ ನಿರಂತರವಾಗಿ ದಾಸೋಹ ಇರಬೇಕು. ವಾಹನಗಳ ನಿಲುಗಡೆಗೆ ಈಗಾಗಲೇ ನಿರ್ಧರಿಸಲಾಗಿರುವ ಸ್ಥಳದಲ್ಲಿ ಅವಕಾಶ ಮಾಡಿಕೊಡಬೇಕು. ಕೆ.ಎಸ್.ಆರ್.ಟಿ.ಸಿ ಬಸ್ಸುಗಳನ್ನು ಹೆಚ್ಚು ನಿಯೋಜನೆ ಮಾಡಬೇಕು. ಭಕ್ತಾಧಿಗಳ ಲಘು ವಾಹನಗಳಿಗೆ ಪಾರ್ಕಿಂಗ್ ಮಾಡಲು ನಿಗದಿಪಡಿಸಲಾಗಿರುವ ಜಾಗದಲ್ಲಿ ಅವಕಾಶ ನೀಡಬೇಕು. ಪೊಲೀಸ್ ಬಂದೋಬಸ್ತ್, ಆರೋಗ್ಯ ಸೇವೆಗಾಗಿ ಹೆಚ್ಚುವರಿ ವೈದ್ಯರ ನೇಮಕ, ರಸ್ತೆ ದುರಸ್ತಿ, ವಾಹನಗಳ ಸಂಚಾರ ನಿಯಂತ್ರಣ, ವಸತಿ ವ್ಯವಸ್ಥೆ, ಸೇವಾ ಕೌಂಟರ್ಗಳ ನಿರ್ವಹಣೆ, ಇತರೆ ಅವಶ್ಯಕ ಸಿದ್ದತೆಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದರು.
ಇದೇ ವೇಳೆ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಸಿದ್ದತೆಗಳ ಸಂಬಂಧ ಸಭೆಗೆ ವಿವರ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ, ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜು, ಸಾಲೂರು ಮಠದ ಶ್ರೀಗಳಾದ ಶಾಂತಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.