ಮೈಸೂರು: ಎರಡು ವರ್ಷಗಳ ಬಳಿಕ ದಸರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು, ಸೆ.27ರಿಂದ ಅ.1ರವರೆಗೆ ಮಹಿಳಾ ಮತ್ತು ಮಕ್ಕಳ ದಸರಾ ನಡೆಯಲಿದೆ.
ಎರಡು ವರ್ಷಗಳ ಬಳಿಕ ಮಹಿಳಾ, ಮಕ್ಕಳ ದಸರಾ ನಡೆಯುತ್ತಿದ್ದು, ಮಹಿಳೆಯರು ಮತ್ತು ಮಕ್ಕಳು ದಸರಾಕ್ಕೆ ರಂಗು ನೀಡಲು ಮುಂದಾಗಿದ್ದಾರೆ. ಮಹಾಮಾರಿ ಕೊರೊನಾದಿಂದಾಗಿ ಎರಡು ವರ್ಷದಿಂದ ಕಳೆಗುಂದಿದ್ದ ದಸರಾ ಮಹೋತ್ಸವಕ್ಕೆ ಈ ಬಾರಿ ಜೀವಕಳೆ ಬಂದಿದೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಮಹಿಳಾ ಮತ್ತು ಮಕ್ಕಳ ದಸರಾವನ್ನು ಪ್ರಸಕ್ತ ವರ್ಷ ವಿಭಿನ್ನ ರೀತಿಯಲ್ಲಿ ಆಯೋಜಿಸಲು ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಮುಂದಾಗಿದೆ.
ಈ ಸಂಬಂಧ ಮಹಿಳೆಯರಿಗೆ ಅನುಕೂಲವಾಗುವ ಹಾಗೂ ಮಕ್ಕಳು, ಮಹಿಳೆಯರು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಮನರಂಜನೆ ನೀಡುವಂತ ನಾನಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಸಬಲೀಕರಣದ ಆಶಯದೊಂದಿಗೆ ಮಹಿಳಾ ಹಾಗೂ ಮಕ್ಕಳ ದಸರಾ ಆಯೋಜಿಸಲು ತೀರ್ಮಾನಿಸಲಾಗಿದೆ.
ನಾನಾ ಸ್ಪರ್ಧೆ, ಭರಪೂರ ಮನರಂಜನೆಯ ಜತೆಗೆ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಈ ಬಾರಿ ವಿಶೇಷವಾಗಿ ಲಿಂಗತ್ವ ಅಲ್ಪಸಂಖ್ಯಾತರನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೂ ಜೋಶ್ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ.
ಐದು ದಿನಗಳ ಪೈಕಿ ಮೂರು ದಿನ ಮಹಿಳಾ ದಸರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸೆ.27ರಿಂದ 29ರವರಗೆ ಮಹಿಳೆಯರಿಗಾಗಿ ನಾನಾ ಕಾರ್ಯಕ್ರಮ ಜರುಗಲಿವೆ. ಜೆ.ಕೆ.ಮೈದಾನದಲ್ಲಿ 27ರಂದು ಉದ್ಘಾಟನಾ ಕಾರ್ಯ ಕ್ರಮ ನಡೆಯಲಿದೆ.
ಮೊದಲ ದಿನ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಎಲ್ಲರನ್ನು ಆಕರ್ಷಿಸಲಿದೆ. ಉದ್ಘಾಟನೆಗೂ ಮುನ್ನ ರಂಗೋಲಿ ಸ್ಪರ್ಧೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಬೆಳ್ಳಂಬೆಳಗ್ಗೆ ನಡೆಯುವ ನಿರೀಕ್ಷೆ ಇದೆ. ಸ್ಪರ್ಧೆಯಲ್ಲಿ ಗೆಲುವು ಪಡೆಯುವ ಮಹಿಳೆಯರಿಗೆ ಆಕರ್ಷಕ ಬಹುಮಾನವೂ ಇರಲಿದೆ. ಮೊದಲ ದಿನ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಮಂದಿರದ ಮಕ್ಕಳಿಂದ ಮೆರವಣಿಗೆ ನಡೆಯಲಿದೆ. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣವಾಗಲಿದೆ.
ಎರಡನೇ ದಿನ ಮಹಿಳೆಯರಿಗೆ ಪದಗಳೊಂದಿಗೆ ರಾಗಿ ಬೀಸುವ ಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತರು ರಾಗಿ ಬೀಸುವ ಕಲ್ಲನ್ನು ತಾವೇ ತಂದು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಎಲ್ಲ ಮಹಿಳೆಯರು ಜಾನಪದ ಸೇರಿದಂತೆ ನಾನಾ ಪದಗಳನ್ನು ಹಾಡುತ್ತರಾಗಿ ಬೀಸಬೇಕಾಗಿದೆ. ಮಹಿಳೆಯರಿಗೆ ವೇಷಭೂಷಣ ಸ್ಪರ್ಧೆ, ಒಲೆ ರಹಿತ ಅಡುಗೆ ಸ್ಪರ್ಧೆ ನಡೆಯಲಿದೆ. ವಿಶೇಷವಾಗಿ ಎರಡನೇ ದಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ನಾನಾ ಸ್ಪರ್ಧೆ ಆಯೋಜಿಸಲಾಗಿದೆ. ಲೆಮೆನ್ ಆಂಡ್ ಸ್ಪೂನ್, ಮಡಕೆ ಒಡೆಯುವ ಸ್ಪರ್ಧೆ ಸೇರಿದಂತೆ ನಾನಾ ಆಟೋಟ ನಡೆಯಲಿವೆ. ಬಳಿಕ ಲಿಂಗತ್ವ ಅಲ್ಪಸಂಖ್ಯಾತರಿಂದ ನೃತ್ಯ ಮತ್ತು ನಾಟಕ ಪ್ರದರ್ಶನಗೊಳ್ಳಲಿದೆ. ಗೋಪಿ ಸೇರಿದಂತೆ ಮಿಮಿಕ್ರಿ ಕಲಾವಿದರಿಂದ ಮಿಮಿಕ್ರಿ ಕಾರ್ಯಕ್ರಮ, ನಾಟಕ ರಂಗ ಟ್ರಸ್ಟ್ ಮೈಸೂರು ವತಿಯಿಂದ ಇವಳಜ್ಜಿ ಅದಮಜ್ಜಿ ನಾಟಕ ಪ್ರದರ್ಶನ ಆಯೋಜಿಸಲು ಚಿಂತಿಸಲಾಗಿದೆ.
ಮೂರನೇ ದಿನ ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಇಲಾಖೆ ಸಿಬ್ಬಂದಿ ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ನಾನಾ ಆಟೋಟ ಆಯೋಜಿಸಲು ಚಿಂತಿಸಲಾಗಿದೆ. ವಿಶೇಷವಾಗಿ ನೀರು ತುಂಬಿದ ಬಿಂದಿಗೆಯನ್ನು ಹೊತ್ತು ನಡೆಯುವ ಸ್ಪರ್ಧೆ, ಲೆಮೆನ್ ಆಂಡ್ ಸ್ಪೂನ್, ಬಲೂನ್ ಊದುವ ಸ್ಪರ್ಧೆ, ಜಾನಪದ ಗೀತೆ ಗಾಯನ ಸ್ಪರ್ಧೆ, ಕೇಶವಿನ್ಯಾಸ ಸ್ಪರ್ಧೆ, ಜಾನಪದ ಸಮೂಹ ನೃತ್ಯ ಸ್ಪರ್ಧೆ ನಡೆಯಲಿವೆ. ಬಳಿಕ ಸುಧಾ ಬರಗೂರು ಅವರಿಂದ ಚುಟುಕು ಹಾಸ್ಯ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ.