ಹುಣಸೂರು: ವಿಶ್ವವಿಖ್ಯಾತ ದಸರಾ ಗಜಪಯಣಕ್ಕೆ ಚಾಲನೆ ನೀಡಿ, ಸರಕಾರ ಲಕ್ಷಾಂತರ ರೂ ವೆಚ್ಚ ಮಾಡಿ ನಿರ್ಮಿಸಿರುವ ವೇದಿಕೆ ಕಾರ್ಯಕ್ರಮಕ್ಕೆ ಇಬ್ಬರು ಸಚಿವರು ಬಾರದೆ ಅಸಡ್ಡೆ ತೋರಿರುವುದು ನೋವಿನ ಸಂಗತಿ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ವೀರನಹೊಸಹಳ್ಳಿ ಅರಣ್ಯದಂಚಿನ ಗಜಪಯಣ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜಮಹಾರಾಜರ ಕಾಲದಿಂದಲೂ ತಾಯಿ ಶ್ರೀ ಚಾಮುಂಡೇಶ್ವರಿ ಕೃಪೆಯೊಂದಿಗೆ ದಸರಾ ಮೆರವಣಿಗೆಯನ್ನು ವಿಶ್ವ ವಿಖ್ಯಾತ ನಾಡಹಬ್ಬವಾಗಿ ಆಚರಿಸಿ ಜನರ ಬದುಕಿಗೆ ಹತ್ತಿರವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಇಂತಹ ಭಾವನಾತ್ಮಕ ಸಂಬಂಧವಿರುವ ಕಾರ್ಯಕ್ರಮಕ್ಕೆ ಸಿದ್ದಗೊಳಿಸಿರುವ ವೇದಿಕೆಗೆ ಬಾರದೆ ಕಾರ್ಯಕ್ರಮಕ್ಕೆ ಅಗೌರವ ತೋರಿದ್ದಾರೆ ಎಂದು ದೂರಿದರು.
ನಾಗರಹೊಳೆ ಕಾಡಂಚಿನ ಗ್ರಾಮಗಳಲ್ಲಿ. ಆನೆ ತಡೆಗೋಡೆ ಶೇ 80 ನಿರ್ಮಾಣದಿಂದ ಆನೆ ಹಾವಳಿ ಕಡಿಮೆಯಾಗಿದ್ದು ಸಂತೋಷದ ವಿಷಯವಾದರೂ, ಇತ್ತೀಚಿಗೆ ಕಾಡು ಹಂದಿ ಹಾಗೂ ನವಿಲುಗಳ ಕಾಟ ಹೆಚ್ಚಾಗಿದು, ಬೆಳೆ ಹಾನಿ ಅಧಿಕವಾಗಿದೆ. ಅರಣ್ಯ ಇಲಾಖೆ ಕೂಡಲೆ ಕ್ರಮವಹಿಸಿ ಅವುಗಳ ಹಾವಳಿ ಕಡಿಮೆ ಮಾಡಿ ರೈತರಿಗೆ ಅನುಕೂಲ ಮಾಡಬೇಕೆಂದು ಒತ್ತಾಹಿಸಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗಜಪಯಣ ನಂತರ ಆನೆಗಳನ್ನು ಲಾರಿಯಲ್ಲಿ ಮೈಸೂರಿಗೆ ಸಾಗಿಸುವ ಬದಲು, ಕಾಲ್ನಡಿಗೆಯಲ್ಲಿ ಮೈಸೂರಿಗೆ ಕರೆ ತರುವಂತೆ ಆಗ್ರಹಿಸಿರುವುದು ಸ್ವಾಗತಾರ್ಹ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಸರಿಯಾದ ಯೋಜನೆ ಮುಖಾಂತರ ಜಾರಿಗೆ ತರಲು ಕ್ರಮವಹಿಸಿ, ಶಾಸಕನಾಗಿ ನನ್ನ ಸಹಕಾರ ನೀಡುವುದಾಗಿ ತಿಳಿಸಿದರು. ಆ ರೀತಿ ಮಾಡುವುದರಿಂದ ದಾರಿ ಉದ್ದಕ್ಕೂ ಸಿಗುವ ಊರಿನ ಜನತೆಗೂ ಸಂತೋಷವಾಗುವುದರ ಜೊತೆ ದಸರಾ ಹಬ್ಬ ಜನರ ಹಬ್ಬವಾಗಲಿ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಎಲ್ಲಾ ಜನಪ್ರತಿನಿಧಿಗಳ ಸಭೆ ಕರೆದು ವಿಶ್ವಾಸಕ್ಕೆ ಪಡೆದು ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು.