ಚಾಮರಾಜನಗರ: ಹದಿಹರೆಯದ ಹೆಣ್ಣುಮಕ್ಕಳ ಸ್ವಚ್ಛ ಹಾಗೂ ಸುರಕ್ಷಿತ ಋತುಚಕ್ರ ನಿರ್ವಹಣೆಗಾಗಿ ಸರ್ಕಾರದ ವಿನೂತನ ಮೈತ್ರಿ ಮುಟ್ಟಿನ ಕಪ್ (ಮೆನ್ಸ್ಟ್ರುಯೆಲ್ ಕಪ್) ಯೋಜನೆಗೆ ಬುಧವಾರ ವಿದ್ಯುಕ್ತ ಚಾಲನೆ ದೊರೆಯಿತು.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಇತಿಹಾಸ ಪ್ರಸಿದ್ದ ಪವಿತ್ರ ಯಾತ್ರಾ ಕ್ಷೇತ್ರ ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಮೈತ್ರಿ ಮುಟ್ಟಿನ ಕಪ್ ಶುಚಿ ಯೋಜನೆಗೆ ವಸತಿ, ಮೂಲ ಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ಡಾ. ಕೆ. ಸುಧಾಕರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಋತುಸ್ರಾವದ ಸಮಯದಲ್ಲಿ ಹೆಣ್ಣುಮಕ್ಕಳು ಅನುಭವಿಸುವ ವೇದನೆ, ನೋವು ಅರ್ಥ ಮಾಡಿಕೊಂಡು ಅವರಿಗಾಗಿ ರೂಪಿಸಿರುವ ಮೈತ್ರಿ ಮುಟ್ಟಿನ ಕಪ್ ಯೋಜನೆ ಅತ್ಯುತ್ತಮ ಕೊಡುಗೆಯಾಗಿದೆ. ಮೈತ್ರಿ ಮುಟ್ಟಿನ ಕಪ್ ಯೋಜನೆ ಹೆಣ್ಣು ಮಕ್ಕಳಿಗೆ ಧೈರ್ಯ ಸ್ಥರ್ಯ ತುಂಬುವಲ್ಲಿ ಮುಖ್ಯವಾಗಿದೆ. ಇಡೀ ಭಾರತದಲ್ಲೇ ಕರ್ನಾಟಕ ರಾಜ್ಯವು ಮೊದಲ ಬಾರಿಗೆ ಈ ಯೋಜನೆಯನ್ನು ಜಾರಿಗೊಳಿಸಿದೆ. ಈ ಅತ್ಯುತ್ತಮ ಯೋಜನೆಯನ್ನು ಹೆಣ್ಣು ಮಕ್ಕಳಿಗೆ ಮನ ಮುಟ್ಟುವಂತೆ ತಲುಪಿಸಿ ಗೆಲ್ಲುವ ಕೆಲಸ ಈ ಯೋಜನೆಗೆ ನಿಯೋಜಿತರಾಗಿರುವ ರಾಯಭಾರಿಗಳಾಗಿದ್ದಾಗಿದೆ ಎಂದು ತಿಳಿಸಿದರು.
ಆರೋಗ್ಯ ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಾದ ಡಾ. ಕೆ. ಸುಧಾಕರ್ ಅವರು ಮಾತನಾಡಿ ಋತುಚಕ್ರ ಎಂಬುದು ಹೆಣ್ಣು ಮಕ್ಕಳ ದೇಹದಲ್ಲಿ ನೈಸರ್ಗಿಕವಾಗಿ ನಡೆಯುವ ನಿರಂತರ ಪ್ರಕ್ರಿಯೆ. ಈ ಬಗ್ಗೆ ಹೆಣ್ಣು ಮಕ್ಕಳು ಆತಂಕ ಮುಜುಗರಕ್ಕೆ ಒಳಗಾಗಬೇಕಿಲ್ಲ. ಋತುಸ್ರಾವ ಸಂದರ್ಭದಲ್ಲಿ ಅವರು ಶುಚಿತ್ವ ಹಾಗೂ ಆರೋಗ್ಯ ಹಿತ ದೃಷ್ಠಿಯಿಂದ ಪರಿಸರ ಸ್ನೇಹಿಯಾಗಿರುವ ಹಾಗೂ ಸುಲಭ ನಿರ್ವಹಣೆಯ ಮೈತ್ರಿ ಮುಟ್ಟಿನ ಕಪ್ ಅನ್ನು ವಿತರಿಸುವ ಈ ಸರ್ಕಾರದ ಯೋಜನೆ ಹೆಣ್ಣು ಮಕ್ಕಳ ಹೃದಯ ಮುಟ್ಟುವ ಯೋಜನೆಯಾಗಿದೆ. ಮೈತ್ರಿ ಮುಟ್ಟಿನ ಕಪ್ ಅನ್ನು6 ರಿಂದ 10 ವರ್ಷದ ವರೆಗೆ ಮರು ಬಳಕೆ ಮಾಡಬಹುದಾಗಿದೆ ಎಂದರು.
ಮೈತ್ರಿ ಮುಟ್ಟಿನ ಕಪ್ ಯೋಜನೆಯ ರಾಯಭಾರಿಗಳಾದ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಪಟು ವೇದಾ ಕೃಷ್ಣಮೂರ್ತಿ, ಖ್ಯಾತ ಚಲನಚಿತ್ರ ನಟಿ ಅಮೃತ ಅಯ್ಯಂಗಾರ್ ಅವರು ಮಾತನಾಡಿದರು
ಶಾಸಕರಾದ ಎನ್. ಮಹೇಶ್, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಕುಲಗಾಣ, ಬಿಳಿಗಿರಿರಂಗನಬೆಟ್ಟದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಾಕಮ್ಮ ನಾಗೇಶ್, ಉಪಾಧ್ಯಕ್ಷರಾದ ಪ್ರತಿಪ್ ಕುಮಾರ್, ಜಿಲ್ಲಾ ಬುಡಕಟ್ಟು ಅಭಿವೃದ್ದಿ ಸಂಘದ ಅಧ್ಯಕ್ಷರಾದ ಸಿ. ಮಹದೇವು, ತಾಲೂಕು ಸೋಲಿಗರ ಅಭಿವೃದ್ದಿ ಸಂಘದ ಅಧ್ಯಕ್ಷರಾದ ದಾಸೇಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದ ಡಿ. ರಂದೀಪ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಎಂ. ಇಂದುಮತಿ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಡಾ. ಜಿ.ಎನ್. ಶ್ರೀನಿವಾಸ್, ಡಾ. ಬಿ.ವೀಣಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.