ಮಡಿಕೇರಿ ಜು.6: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ನಿಗಧಿ ಮಾಡಬೇಕೆಂದು ಒತ್ತಾಯಿಸಿ ಜು.13 ರಂದು ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಸಂಘ (ಸಿಐಟಿಯು) ವತಿಯಿಂದ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಪಿ.ಆರ್.ಭರತ್ ಹಾಗೂ ಪ್ರಧಾನ ಕಾರ್ಯದರ್ಶಿ ಎನ್.ನವೀನ್ ಕುಮಾರ್ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದ್ದರೂ ವೇತನ ಹೆಚ್ಚಳ ಮಾಡದ ಸರಕಾರ ದುಡಿಯುವ ವರ್ಗವನ್ನು ನಿರ್ಲಕ್ಷö್ಯದಿಂದ ನೋಡುತ್ತಿದೆ ಎಂದು ಆರೋಪಿಸಿದ್ದಾರೆ.
ಗ್ರಾ.ಪಂ ನೌಕರರಿಗೆ ಕನಿಷ್ಠ ವೇತನ ನಿಗಧಿ ಪಡಿಸಬೇಕು, ತುಟ್ಟಿ ಭತ್ಯೆ ಮತ್ತು ಬಾಕಿ ಉಳಿಸಿಕೊಂಡಿರುವ ವೇತನ ಬಿಡುಗಡೆ ಮಾಡಬೇಕು ಹಾಗೂ ನಿವೃತ್ತಿಯಾದ ನೌಕರಿಗೆ ಉಪಧನ ನೀಡಬೇಕೆಂದು ಪ್ರತಿಭಟನೆ ಸಂದರ್ಭ ಒತ್ತಾಯಿಸುವುದಾಗಿ ಅವರು ಹೇಳಿದ್ದಾರೆ.
ಗ್ರಾ.ಪಂ ನೌಕರರಾದ ಬಿಲ್ ಕಲೆಕ್ಟರ್, ಗುಮಾಸ್ತ, ಕ್ಲರ್ಕ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಅಟೆಂಡರ್, ವಾಟರ್ ಮ್ಯಾನ್, ಸ್ವೀಪರ್ ಇತ್ಯಾದಿ ನೌಕರರಿಗೆ 2016 ಆಗಸ್ಟ್ ತಿಂಗಳಿನಲ್ಲಿ ಮಾಡಲಾದ ಪರಿಷ್ಕರಣೆಯಂತೆ ಕನಿಷ್ಠ ವೇತನ ನಿಗಧಿ ಮಾಡಿ ನೀಡಲಾಗುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠ ವೇತನದ ಕುರಿತು 2021 ನವೆಂಬರ್ ತಿಂಗಳಿನಲ್ಲಿ ಸರಕಾರ ಹೊರಡಿಸಿದ ಕರಡು ಅಧಿಸೂಚನೆಗಳಿಗೆ ಸಲಹೆ/ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ.
ಈ ಕರಡಿನಲ್ಲಿ ಬಿಲ್ ಕಲೆಕ್ಟರ್, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳಿಗೆ ರೂ 15,196, ವಾಟರ್ ಮ್ಯಾನ್, ಪಂಪ್ ಆಪರೇಟರ್ಗಳಿಗೆ ರೂ.13,509 ಅಟೆಂಡರ್ಗಳಿಗೆ ರೂ.12,873 ಸ್ವೀಪರ್ಗಳಿಗೆ ರೂ.16,019 ಎಂದು ತಿಳಿಸಿದೆ.
ಸಂಘವು ಗ್ರಾ.ಪಂ ಗಳಲ್ಲಿ ವಿವಿಧ ಕೆಲಸಗಳಲ್ಲಿ ದುಡಿಯುವ ನೌಕರರಿಗೆ ಕುಶಲತೆಯ ಆಧಾರದಲ್ಲಿ “ಸಮಾನ ಕೆಲಸಕ್ಕೆ ಸಮಾನ ವೇತನ” ನಿಗಧಿ ಪಡಿಸುವುದು ಅತ್ಯಗತ್ಯ ಎಂದು ಒತ್ತಾಯಿಸಿತ್ತು. ಅದೇ ರೀತಿಯಲ್ಲಿ ನೌಕರರ ಸೇವಾ ಅವಧಿಗೆ ಮಾನ್ಯತೆ ನೀಡುವ ರೀತಿಯಲ್ಲಿ ನಿಗಧಿ ಪಡಿಸಲಾಗಿರುವ ಮೂಲ ವೇತನದಲ್ಲಿ ಹೆಚ್ಚಳವಾಗಬೇಕು. ಹಣದುಬ್ಬರ ಶೇ.7.8 ರಷ್ಟಾಗಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಕಾನೂನಾತ್ಮಕ ಅಂಶಗಳನ್ನು ಪರಿಗಣಿಸಿ ಗ್ರಾ.ಪಂ ನೌಕರರಾದ ಬಿಲ್ ಕಲೆಕ್ಟರ್, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳಿಗೆ ರೂ.38,021, ವಾಟರ್ ಮ್ಯಾನ್, ಪಂಪ್ ಆಪರೇಟರ್ಗಳಿಗೆ ರೂ.33,062, ಅಟೆಂಡರ್ಗಳಿಗೆ ರೂ.28,750 ಹಾಗೂ ಸ್ವಚ್ಛತಾಗಾರರಿಗೆ ರೂ.25,000 ನೀಡಬೇಕೆಂದು ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ 2022 ಜ.27 ರಂದು ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಆದರೆ ಕನಿಷ್ಠ ವೇತನ ನಿಗಧಿಗೆ ಸರಕಾರ ಮೀನಾ ಮೇಷ ಎಣಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಸರಕಾರದ ನಿರ್ಲಕ್ಷö್ಯವನ್ನು ಖಂಡಿಸಿ ಮತ್ತು ವೇತನ ನಿಗಧಿಗೆ ಒತ್ತಾಯಿಸಿ ಜು.13 ರಂದು ರಾಜ್ಯದ ಎಲ್ಲಾ ಜಿಲ್ಲೆಗಳ ಕಾರ್ಮಿಕ ಅಧಿಕಾರಿಗಳ ಕಛೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕೊಡಗು ಜಿಲ್ಲೆಯಲ್ಲಿ ಕೂಡ ಪ್ರತಿಭಟನೆ ನಡೆಯಲಿದ್ದು, ಎಲ್ಲಾ ಗ್ರಾ.ಪಂ ನೌಕರರು ಪಾಲ್ಗೊಳ್ಳಬೇಕೆಂದು ಭರತ್ ಮನವಿ ಮಾಡಿದ್ದಾರೆ.