ಚಾಮರಾಜನಗರ: ಪಾದಯಾತ್ರೆ ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ರಾಮನಗರ ಜಿಲ್ಲೆಯ ಕನಕಪುರದ ಸಂಗಮ ಕ್ಷೇತ್ರದ ಕಾವೇರಿ ನದಿ ತೀರದಲ್ಲಿ ಸಾಲೂರು ಶ್ರೀಗಳಾದ ಶಾಂತಮಲ್ಲಿಕಾರ್ಜುನ ಸ್ವಾಮಿ ದರ್ಶನಾರ್ಶೀವಾದ ನೀಡಿದರಲ್ಲದೆ, ಭಕ್ತರೊಂದಿಗೆ ನದಿ ದಾಟಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆ ಅದರಂತೆ ಭೂಮಿಯು ಸುಂದರವಾದ ವಧುವಿನಂತೆ, ಅವಳ ಸೌಂದರ್ಯವನ್ನು ಹೆಚ್ಚಿಸಲು ಯಾವುದೇ ಮಾನವ ನಿರ್ಮಿತ ಆಭರಣಗಳ ಅಗತ್ಯವಿಲ್ಲ ಆದ್ದರಿಂದ ಮನುಷ್ಯರಾದ ನಾವುಗಳು ಪ್ರಕೃತಿಯನ್ನು ಆರಾಧಿಸಬೇಕು, ಪೂಜಿಸಬೇಕು, ಸಂರಕ್ಷಣೆ ಮಾಡಬೇಕು ಇದು ಎಲ್ಲರ ಕರ್ತವ್ಯವಾಗಬೇಕು ಎಂದರು.
ಮಲೆ ಮಹದೇಶ್ವರರ ಸನ್ನಿಧಾನಕ್ಕೆ ಲಕ್ಷಾಂತರ ಭಕ್ತರು ಪಾದಯಾತ್ರೆಯಲ್ಲಿ ಬರುತ್ತಿದ್ದಾರೆ ಪಾದಯಾತ್ರೆ ಮಾಡುವ ಮಾರ್ಗವೆಲ್ಲವೂ ಬೆಟ್ಟ ಗುಡ್ಡಗಳು ಅರಣ್ಯ, ಪ್ರದೇಶದ ನದಿಯಿಂದ ಆವೃತ್ತವಾಗಿದೆ. ನಮ್ಮ ಪ್ರಕೃತಿಯನ್ನು ಸಂರಕ್ಷಿಸ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಆಹಾರ ಪದಾರ್ಥಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಒಂದು ಕಡೆ ಹಾಕಿ ಸ್ವಚ್ಛತೆಯನ್ನು ಕಾಪಾಡಿ ಎಂದು ಮನವಿ ಮಾಡಿದರು.
ಈ ಬಾರಿ ಚಾಮರಾಜನಗರ, ರಾಮನಗರ ಜಿಲ್ಲಾಡಳಿತ, ಅರಣ್ಯ ಇಲಾಖೆಯು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಭಕ್ತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ, ಕನಕಪುರದ ಮಹದೇವನಾಯ್ಕ ಹಾಗೂ ಅನೇಕ ಭಕ್ತರ ಅಲ್ಲಲ್ಲಿ ದಾಸೋಹ ಮಜ್ಜಿಗೆ ಪಾನಕ ವ್ಯವಸ್ಥೆಯು ಅಚ್ಚುಕಟ್ಟಾಗಿದೆ. ಪಾದಯಾತ್ರೆಯಲ್ಲಿ ಬರುವ ಭಕ್ತಾದಿಗಳಿಗೆ ಪ್ರಾಧಿಕಾರದ ವತಿಯಿಂದ ವಿಶೇಷ ದರ್ಶನ ವ್ಯವಸ್ಥೆ ಮಾಡಿರುವುದು ಸಂತಸ ತಂದಿದೆ ಎಂದರು.