ಚಾಮರಾಜನಗರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯ ಭಯ ಯಾವಾಗಲೂ ಇದೆ. ಆದ್ದರಿಂದ ಗಡಿಯಾರದ ರೀತಿಯಲ್ಲಿ 24 ಗಂಟೆಗಳ ಕಾಲವೂ ಬಿಜೆಪಿಯವರು ಏನಾದರೂ ಕುತಂತ್ರ ಮಾಡುತ್ತಿರುತ್ತಾರೆ. ಬೇರೆ ಪಕ್ಷಗಳಿಂದ ಬರುವ ಶಾಸಕರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ಚರ್ಚೆ ನಡೆಯುತ್ತಿದೆ, ಇದನ್ನು ಆಪರೇಷನ್ ಹಸ್ತ ಎಂದೂ ಕರೆಯಬಹುದು ಅಥವಾ ಘರ್ ವಾಪಸ್ಸಿ ಎಂದೂ ಹೇಳಬಹುದ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಚಾಮರಾಜನಗರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಬಿಜೆಪಿ, ಜೆಡಿಎಸ್ ಶಾಸಕರೊಂದಿಗೆ ಮಾತುಕತೆ ನಡೆಯುತ್ತಿದೆ. ಅವರೇ ಪಕ್ಷಕ್ಕೆ ಬರಲು ಆಸಕ್ತಿ ತೋರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಬರುವವರಿಗೆ ಸ್ವಾಗತ ಎಂದು ಈಗಾಗಲೇ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದರು.
ಬಿಜೆಪಿಯ 10 ಹಾಗೂ ಜೆಡಿಎಸ್ ನ 10 ಶಾಸಕರು ಕಾಂಗ್ರೆಸ್ ವರಿಷ್ಟರ ಸಂಪರ್ಕದಲ್ಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸತೀಶ ಜಾರಕಿಹೊಳಿ ಹೇಳಿದರು.
ಆಪರೇಷನ್ ಹಸ್ತ ಮಾಡಿದರೆ ರಾಜಕೀಯ ಮತ್ತೆ ಕಲುಷಿತವಾಗುವುದಿಲ್ಲವೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಬಿಜೆಪಿಯವರ ರೀತಿ ನಾವು ಸರ್ಕಾರ ಉರುಳಿಸಲು ಹೊರಟಿಲ್ಲ. ನಾವಾಗಿಯೇ ಶಾಸಕರನ್ನು ಕರೆದಿಲ್ಲ. ಅವರಾಗಿಯೇ ಆಸಕ್ತಿ ತೋರಿದ್ದಾರೆ. ಈಗ ರಾಜಕೀಯ ವಾತಾವರಣ ಬದಲಾಗಿದೆ. ಪಕ್ಷದಿಂದ ಹೋಗಿದ್ದವರು ಪಶ್ಚಾತ್ತಾಪ ಪಟ್ಟಿದ್ದಾರೆ ಎಂದರು.
ಬೇರೆ ಪಕ್ಷದಿಂದ ಬಂದವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಕೇಳಿದ್ದಕ್ಕೆ, ಅದು ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರಿಗೆ ಬಿಟ್ಟ ವಿಚಾರ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಸತೀಶ್ ಜಾರಕಿಹೊಳಿ , ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಸುಪ್ರೀಂಕೋರ್ಟ್ ಸೂಚನೆಯಂತೆ ನೀರು ಹರಿಸಲಾಗುತ್ತಿದೆ. ಇದರಲ್ಲಿ ಸರ್ಕಾರದ ಪಾತ್ರ ಇಲ್ಲ. ಮುಂದಿನ ವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಇದ್ದು, ರಾಜ್ಯದ ಸ್ಥಿತಿಗತಿ ಮನವರಿಕೆ ಮಾಡಿಕೊಡಲಾಗುವುದು ಎಂದರು.