ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಾಗರಹೊಳೆ ವನ್ಯಜೀವಿ ವಲಯದ ಗೋಣಿಗದ್ದೆ ಶಾಖೆಯ ಕುಂದೂರು ಗಸ್ತಿನ ನಾಗಸಾರಕೆರೆ ಸಮೀಪ ಮೂರು ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದೆ.
ಹುಲಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಹುಲಿಯು ಅನಾರೋಗ್ಯದಿಂದ ಸಾವನ್ನಪ್ಪಿರುವ ಶಂಕೆ ಇದ್ದು, ನೈಜ ಕಾರಣ ತಿಳಿಯಲು ಅಂಗಾಂಗಳ ಮಾದರಿಯನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೆ ನಿಖರ ಮಾಹಿತಿ ತಿಳಿಯಲಿದೆ ಎಂದು ಡಿಸಿಎಫ್ ಮಹೇಶ್ಕುಮಾರ್ ತಿಳಿಸಿದ್ದಾರೆ.
ಸ್ಥಳಕ್ಕೆ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್ಕುಮಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದರು. ಹುಲಿಯ ಹಲ್ಲು, ಉಗುರು ಹಾಗೂ ಎಲ್ಲಾ ಅಂಗಾಂಗಗಳು ಸುರಕ್ಷಿತವಾಗಿದ್ದು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಿಗಧಿಪಡಿಸಿರುವ ಎಸ್.ಒ.ಪಿ. ಯಂತೆ ಹುಲಿಯ ಮರಣೋತ್ತರ ಪರೀಕ್ಷೆಯನ್ನು ನೆರವೇರಿಸಲಾಗಿದೆ. ಈ ವೇಳೆ ಎಸಿಎಫ್ ಗೋಪಾಲ್, ವೈಲ್ಡ್ಲೈಫ್ ಟ್ರಸ್ಟ್ ಆಫ್ ಇಂಡಿಯಾದ ವೆಂಕಟನಾಯ್ಡು, ನಾಗರಹೊಳೆ ವಲಯ ಅರಣ್ಯಾಧಿಕಾರಿ ಮಹಮದ್ ಜೀಷಾ ಮತ್ತಿತರಿದ್ದರು.