ಹುಣಸೂರು: ಇತ್ತೀಚೆಗೆ ಸುರಿದ ಮಳೆಯ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ ಕರ್ಣಕುಪ್ಪೆ ಗ್ರಾಮದ ಮಹಿಳೆಯ ಕುಟುಂಬಕ್ಕೆ ಸರ್ಕಾರದಿಂದ ನೀಡಲಾಗುವ ಐದು ಲಕ್ಷ ರೂ.ಗಳ ಪರಿಹಾರವನ್ನು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ವಿತರಿಸಿದರು.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕರ್ಣಕುಪ್ಪೆ ಗ್ರಾಮದ ನಿವಾಸಿ ಗಾಯಿತ್ರಮ್ಮ ಎಂಬುವರು ಶಾಲೆಯ ಮುಖ್ಯ ಅಡುಗೆಯವರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಸಿಡಿಲು ಬಡಿದು ಸಾವನ್ನಪ್ಪಿದ್ದರು.
ಶನಿವಾರ ಹನಗೋಡು ಹೋಬಳಿಯ ಕರ್ಣಕುಪ್ಪೆ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು, ಗಾಯಿತ್ರಮ್ಮ ಅವರ ಮನೆಗೆ ಭೇಟಿ ನೀಡಿ, ಅವರ ಮಕ್ಕಳಿಗೆ ಸಾಂತ್ವಾನ ಹೇಳಿ ಸರಕಾರದಿಂದ ನೀಡಲಾಗಿರುವ ಐದು ಲಕ್ಷ ರೂ.ನ ಚೆಕ್ ವಿತರಿಸಿ, ಈ ಹಣವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದರಲ್ಲದೆ, ಸರಕಾರದಿಂದ ಯಾವುದೇ ನೆರವು ಬೇಕಿದ್ದಲ್ಲಿ ತಾಲೂಕು ಆಡಳಿತವನ್ನು ಸಂಪರ್ಕಿಸುವಂತೆ ಹೇಳಿದ್ದಾರೆ.
ಇದೇ ವೇಳೆ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಾನಿಗೊಳಗಾದ ಹನಗೋಡು ಹೋಬಳಿಯ ಹೆಮ್ಮಿಗೆ, ಹೆಮ್ಮಿಗೆ ಹಾಡಿ, ಹೆಮ್ಮಿಗೆ ಕಾಲೋನಿ ಹಾಗೂ ಕಾಳಬೂಚನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಮನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಜಿಲ್ಲಾಧಿಕಾರಿ ಭೇಟಿ ವೇಳೆ ಉಪವಿಭಾಗಾಧಿಕಾರಿ ವರ್ಣಿತ್ ನೇಗಿ, ತಹಸೀಲ್ದಾರ್ ಡಾ.ಅಶೋಕ್, ಆರ್.ಐ.ಮಹದೇವ್, ವಿ.ಎ.ಶಿವಕುಮಾರ್, ಕಂದಾಯ ಇಲಾಖೆ ಹಾಗೂ ಗ್ರಾ.ಪಂ.ಅಧಿಕಾರಿಗಳು ಇದ್ದರು.